ADVERTISEMENT

ಅಂತಿಮ ನಿರ್ಧಾರ 27ಕ್ಕೆ: ಶಾಸಕ ರವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:05 IST
Last Updated 24 ಫೆಬ್ರುವರಿ 2011, 9:05 IST

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆ ಮತ್ತು ಮಾರ್ಕೆಟ್ ರಸ್ತೆ ವಿಸ್ತರಣೆ ನಿರ್ಧರಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.ನಗರಸಭೆ ಸಭಾಂಗಣದಲ್ಲಿ ನಡೆದ ರತ್ನಗಿರಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರ ಸಭೆಯಲ್ಲಿ ಮಾತನಾಡಿ, ಇದೇ 26 ಅಥವಾ 27 ರಂದು ಜಿಲ್ಲಾಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಟ್ಟಡ ಮಾಲೀಕರು ರಸ್ತೆ ಮಧ್ಯಭಾಗದಿಂದ 50 ಅಡಿಗೆ  ವಿಸ್ತರಿಸಬೇಕೆಂದು ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ 60 ಅಡಿ ವಿಸ್ತರಿಸಲು ತೀರ್ಮಾನಿಸಿದೆ. ಕಟ್ಟಡ ಮಾಲೀಕರಿಗೆ ಅನ್ಯಾಯವಾಗದಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.ಈ ರಸ್ತೆಗೆ 4ಕೋಟಿ ರೂಪಾಯಿ ಹಣ ನಿಗದಿಪಡಿಸಲಾಗಿದೆ. ಕೇಂದ್ರ ರಸ್ತೆ ಅಭಿವೃದ್ಧಿ ನಿಗಮದಿಂದ ರಸ್ತೆಯನ್ನು ಹಾಗೂ ನಗರಸಭೆಯ ಕೆಎಂಆರ್‌ಪಿ ಯೋಜನೆಯಡಿ ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದೆಂದು ಹೇಳಿದರು.

ರಾಜ್ಯ ಹೆದ್ದಾರಿ ನಿಯಮದಂತೆ ಒಟ್ಟು 70 ಅಡಿಗಳಲ್ಲಿ 50 ಅಡಿ ರಸ್ತೆ 20 ಅಡಿ ಸೆಟ್‌ಬ್ಯಾಕ್ ಬಿಡಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಇಂಜನಿಯರ್ ಮಾದೇಗೌಡ ಮಾಹಿತಿ ನೀಡಿದರು. ನಿಯಮದಂತೆ ರಸ್ತೆ ಅಗಲೀಕರಣಕ್ಕೆ ಮುಂದಾದರೆ ಒತ್ತುವರಿಯನ್ನು ಹೊರತು ಪಡಿಸಿ ಉಳಿದ ಜಾಗಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇಲ್ಲವಾದರೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕೈಗೊಳ್ಳುವ ಅವಕಾಶ ಇದೆ ಎಂದರು.

ಈ ರಸ್ತೆಯಲ್ಲಿ ಉಳ್ಳವರು, ಇಲ್ಲದವರು ಇದ್ದಾರೆ. 40 ಅಡಿಗೆ ನಿಗದಿಪಡಿ ಸುವುದು ಸೂಕ್ತ. ಚರಂಡಿಯಿಂದ ಚರಂಡಿಗೆ ಮಧ್ಯಭಾಗವನ್ನು ಗೊತ್ತು ಪಡಿಸಬೇಕೆಂದು ನಂಜುಂಡಸ್ವಾಮಿ ಸಲಹೆ ನೀಡಿದರು.ರತ್ನಗಿರಿ ರಸ್ತೆಯಲ್ಲಿ ಕೆಲವರಿಗೆ ಮನೆಯಲ್ಲಿ ಜಾಗ ಇದೆ. ಮತ್ತೆ ಕೆಲವರು ಜಾಗ ಕಳೆದುಕೊಳ್ಳಬೇಕಾಗುತ್ತದೆ. ಪದೇ ಪದೇ ರಸ್ತೆ ವಿಸ್ತರಣೆ ಬೇಡ. ಕಟ್ಟಡ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಡಾ.ಡಿ.ಎಲ್.ವಿಜಯಕುಮಾರ್ ತಿಳಿಸಿದರು.

ರಸ್ತೆಯಲ್ಲಿ ಒಟ್ಟು 162 ಮಂದಿ ವಾಸವಾಗಿದ್ದಾರೆ. ಅದರಲ್ಲಿ 76 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಗರಸಭೆ ಎಂಜಿನಿಯರ್ ತೇಜಮೂರ್ತಿ ಶಾಸಕರಿಗೆ ಮಾಹಿತಿ ನೀಡಿದರು. ರಸ್ತೆ ಮಧ್ಯಭಾಗದಿಂದ 25ಅಡಿ ವಿಸ್ತರಣೆ ಮಾಡುವುದು ಸೂಕ್ತವೆಂದು ನರೇಂದ್ರ ಪೈ ಹೇಳಿದರು.ಆರ್.ಜಿ. ರಸ್ತೆ ವಿಸ್ತರಣೆ ಮಾಡುವಾಗ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದ ರೀತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಟೌನ್‌ಕ್ಯಾಂಟೀನ್‌ವರೆಗೆ ವಿಸ್ತರಣೆ ಮಾಡಬೇಕೆಂದು ವೆಂಕಟೇಶನಾಯ್ಡು ತಿಳಿಸಿದರು.

ಕಟ್ಟಡ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗ ರಸ್ತೆ ವಿಸ್ತರಣೆ ಮಾಡಲಾಗುವುದೆಂದು ಶಾಸಕರು ತಿಳಿಸಿದರು. ಕಟ್ಟಡ ಒಡೆದುಕೊಳ್ಳಲು ಮಾಲೀಕರು ಮುಂದಾಗದಿದ್ದರೆ, ವಿಸ್ತರಣೆ ವೇಳೆ ಕಟ್ಟಡವನ್ನು ಜಿಲ್ಲಾಡಳಿತವೇ ತೆರವುಗೊಳಿಸುತ್ತದೆ ಅದಕ್ಕೆ ತಗಲುವ ವೆಚ್ಚವನ್ನು ಮಾಲೀಕರೇ ಭರಿಸಬೇಕಾಗುತ್ತದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಕೆ.ಶ್ರೀನಿವಾಸ, ಆಯುಕ್ತ ಕೃಷ್ಣಮೂರ್ತಿ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.