ADVERTISEMENT

ಆರತಿ ಸಾಂಸ್ಕೃತಿಕ ರಾಯಭಾರಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:26 IST
Last Updated 17 ಸೆಪ್ಟೆಂಬರ್ 2013, 8:26 IST

ಚಿಕ್ಕಮಗಳೂರು: ‘ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿ, ನಿಜವಾದ ಸಾಂಸ್ಕೃತಿಕ ರಾಯಭಾರಿಯಾಗಿ ಡಾ.ಆರತಿ ಕೃಷ್ಣ ಕೆಲಸ ಮಾಡಿದ್ದಾರೆ’ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.

ನಗರದ ಎಐಟಿ ಕಾಲೇಜು ಬಿಜಿಎಸ್‌ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕುವೆಂಪು ವಿಶ್ವ­ವಿದ್ಯಾಲಯದ ಗೌರವ ಡಿ.ಲಿಟ್‌ ಪುರಸ್ಕೃತ ಡಾ.ಆರತಿಕೃಷ್ಣ ಅವರನ್ನು ಅಭಿನಂದಿಸಿ ಆಶೀರ್ವಚನ ನೀಡಿದರು.

ಸಾಧಕರಿಗೆ ಬೇರೆಡೆಯಿಂದ ಸಾಕಷ್ಟು ಮನ್ನಣೆ ದೊರೆತರೂ, ತನ್ನ ತವರು ನೆಲದಲ್ಲಿ ಪ್ರೀತಿವಿಶ್ವಾಸ ತೋರಿಸದಿದ್ದರೆ ಒಂದು ಬಗೆಯ ನೋವು ಕಾಡುತ್ತದೆ. ತನ್ನ ಮಾತೃಭೂಮಿಯ ಜನರ ಪ್ರೀತಿವಿಶ್ವಾಸ ದೊರೆತರೆ ಅವರ ಆತ್ಮಬಲ ಮತ್ತಷ್ಟು ವೃದ್ಧಿಯಾಗಿ, ಇನ್ನಷ್ಟು ಎತ್ತರದ ಸಾಧನೆ ಮಾಡುತ್ತಾರೆ ಎಂದರು.

ಯಾವುದೇ ಜಾತಿ, ಧರ್ಮದಲ್ಲಿ ಹುಟ್ಟಿ ಎಲ್ಲೆ ನೆಲೆಸಿದರೂ ತನ್ನ ದೇಶ­ವನ್ನು ಎಂದಿಗೂ ಮರೆಯಬಾರದು. ರಾಷ್ಟ್ರ­ವನ್ನು ಪ್ರತಿಯೊಬ್ಬರು ಪ್ರೀತಿಸ­ಬೇಕು ಎಂದರು.

ನಾಗರಿಕ ಅಭಿನಂದನಾ ಕಾರ್ಯ­ಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಡಾ.ಆರತಿಕೃಷ್ಣ ಅವರು ವಿಶ್ವದ ಜ್ಞಾನ ಸಂಪಾದಿಸಿ, ಹೊರ ದೇಶಗಳಲ್ಲಿ ಇವರೊಬ್ಬ ವಿಶ್ವಕೋಶವೆಂದೆ ಗುರುತಿಸಿ­ಕೊಂಡಿದ್ದಾರೆ. ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಅನುಭವದಿಂದ ವಿಶ್ವದ ಅನೇಕ ವಿಶ್ವವಿದ್ಯಾಲಯಗಳ ಸಂಪರ್ಕ ಸಾಧಿಸಿದ್ದಾರೆ. ಇವರೊಬ್ಬ ಬಹು­ಭಾಷಾ ವಿಜ್ಞಾನಿ ಎಂದರೂ ಅತಿಶ­ಯೋಕ್ತಿ­­ಯಾಗಲಾರದು. ತಮ್ಮ ಸ್ವಸಾ­ಮ­ರ್ಥ್ಯ­ದಿಂದ ಸಾಧನೆಯ ಎತ್ತರಕ್ಕೆ ಬೆಳೆದು, ಇತರರಿಗೂ ಮಾದರಿ­ಯಾಗಿದ್ದಾರೆ. ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಇವರು ಸಲ್ಲಿಸಿರುವ ಸೇವೆ ಅನನ್ಯ ಎಂದು ಬಣ್ಣಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಶಿಕ್ಷಣದಿಂದ ರಾಷ್ಟ್ರವನ್ನು ಬಲಾಢ್ಯ­ಗೊಳಿಸಬಹುದು. ಪ್ರತಿಯೊಬ್ಬ ಮಹಿಳೆ­ಯರು ಶಿಕ್ಷಣ ಪಡೆದು, ರಾಷ್ಟ್ರ ಬಲಿಷ್ಠ­ಗೊಳಿಸುವ ಸಂಕಲ್ಪ ಯಶಸ್ವಿ­ಗೊಳಿಸ­ಬೇಕು ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಅಭಿನಂದನಾ ನುಡಿ ಆಡಿದರು. ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರಜೈನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.