ADVERTISEMENT

`ಎಚ್‌ಡಿಕೆ ಜನಪರ ಧೋರಣೆ ಗೆಲುವಿಗೆ ಶ್ರೀರಕ್ಷೆ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:43 IST
Last Updated 26 ಏಪ್ರಿಲ್ 2013, 9:43 IST

ಅಜ್ಜಂಪುರ: ಜೆಡಿಎಸ್‌ನ ಜನಪರ ಧೋರಣೆ, ರೈತಪರ ಹೋರಾಟಗಳು ಹಾಗೂ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಎಚ್‌ಡಿಕೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಜೆಡಿಎಸ್‌ಗೆ ಶ್ರೀರಕ್ಷೆಯಾಗಿದ್ದು, ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಜೆಡಿಎಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಪದ್ಮತಿಮ್ಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಅಜ್ಜಂಪುರ ಸಮೀಪದ ಬುಕ್ಕಾಂ ಬುದಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಕೈಗೊಂಡ ಅವರು ಮಾತನಾಡಿದರು.ಸ್ವಜನಪಕ್ಷಪಾತ, ಭ್ರಷ್ಟಾಚಾರ, ಗಣಿಹಗರಣ, ಆಂತರಿಕ ಕಚ್ಚಾಟದಿಂದ ದುರಾಡಳಿತ ನಡೆಸಿದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರಚಾರ ಕೈಗೊಂಡಿರುವ ಸಂದರ್ಭದಲ್ಲಿ ಜನರ ಪ್ರತಿಕ್ರಿಯೆ ಉತ್ತಮವಾಗಿದ್ದು, ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಜಯಗಳಿಸಲಿದ್ದಾರೆ ಎಂದರು.

  ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾದ ಟಿ.ಆರ್.ನಾಗರಾಜ್ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಮಹಿಳೆಯರು, ಕೃಷಿಕರು, ಅಂಗವಿಕಲರು, ಮುಸ್ಲಿಂ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳ ಜನರು ಸ್ವಯಂ ಪ್ರೇರಿತರಾಗಿ ಜೆಡಿಎಸ್ ಬೆಂಬಲಿಸು ತ್ತಿರುವುದು ಆಶಾದಾಯಕವಾಗಿದ್ದು, ಜೆಡಿಎಸ್ ಗೆಲುವು ನಿಶ್ಚಿತ ಎಂದರು.

ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ, ಜಿ.ಪಂ ಸದಸ್ಯ ಕೃಷ್ಣಪ್ಪ, ವಿಶ್ವಕುಮಾರ್, ಪ್ರಕಾಶ್, ಬಾಬು ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.