ADVERTISEMENT

ಒಕ್ಕಲಿಗರ ಚುನಾವಣೆ: ನಾಗರಾಜ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:18 IST
Last Updated 7 ಜನವರಿ 2014, 6:18 IST

ಚಿಕ್ಕಮಗಳೂರು: ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಸ್ಥಾನದ ಚುನಾವಣೆಯಲ್ಲಿ ಬ್ಯಾರವಳ್ಳಿ ಜೆ.ನಾಗರಾಜ್‌ 106 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಮತ ಎಣಿಕೆ ನಡೆದಾಗ, ತಮಗೆ ತೀವ್ರ ಪೈಪೋಟಿ ಒಡ್ಡಿದ್ದ ಚಿಕ್ಕಮಗಳೂರಿನ ಎ.ಪೂರ್ಣೇಶ್‌ (1871 ಮತಗಳು), ಮೂಡಿಗೆರೆಯ ಹಳಸೆ ಶಿವಣ್ಣ (1233) ಅವರನ್ನು ಮಣಿಸಿದ ನಾಗರಾಜ್‌ 1977 ಮತಗಳನ್ನು ಪಡೆದು ವಿಜಯಮಾಲೆ ಧರಿಸಿದರು.

ಎನ್‌.ಆರ್‌.ಪುರದ ಡಾ.ಕೆ.ಪಿ.ಅಂಶುಮಂತ್‌ 920 ಮತಗಳನ್ನು ಪಡೆದರೆ, ಮಾಕೋಡಿನ ಗಂಧದ ಎಂ.ಡಿ.ಕೃಷ್ಣೇಗೌಡ 246 ಮತ್ತು ವಿಜಯ ಬ್ಯಾಂಕ್‌ ನಿವೃತ್ತ ಅಧಿಕಾರಿ ಬಿ.ಎಸ್‌.ಸುಬ್ರಹ್ಮಣ್ಯಗೌಡ ಕೇವಲ 49 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 7498 ಸದಸ್ಯರ ಪೈಕಿ 6308 ಮಂದಿ ಮತ ಚಲಾಯಿಸಿದ್ದರು.

ಮೊದಲೆರಡು ಸುತ್ತುಗಳ ಎಣಿಕೆಯಲ್ಲಿ ಪೂರ್ಣೇಶ್‌ 250 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದರು. ಕೊನೆಯ ಎರಡು ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡ ಜೆ.ನಾಗರಾಜ್‌ ಗೆಲುವಿನ ನಗೆ ಬೀರಿದರು. ಶಿವಣ್ಣ ಮತ್ತು ಡಾ.ಅಂಶುಮಂತ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಅತ್ಯಂತ ಸುವ್ಯವಸ್ಥಿತವಾಗಿ ನಡೆಸಿದ ಚುನಾವಣೆ ಮತದಾನ ಮತ್ತು ಎಣಿಕೆ ಪ್ರಕ್ರಿಯೆ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.