ADVERTISEMENT

ಕಡೂರಿಗೆ ಜನತಾ ನ್ಯಾಯಾಲಯ ಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 9:15 IST
Last Updated 3 ಜೂನ್ 2011, 9:15 IST

ಕಡೂರು: ಮಹಿಳೆಯರು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಸಾಮಾನ್ಯ ಕಾನೂನಿನ ತಿಳಿವಳಿಕೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ವಕೀಲ ಬೊಮ್ಮಣ್ಣ ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನಿನ ಅರಿವು ಮೂಡಿಸುವ ರಥ ಯಾತ್ರೆ ಬುಧವಾರ ಪಟ್ಟಣದ ಬಿಜಿಎಸ್ ಕಾಲೇಜು ಆವರಣಕ್ಕೆ ತೆರಳಿ ಶಾಲಾ ಕಾಲೇಜು ಮಕ್ಕಳನ್ನು ಕುರಿತು ಮಾತನಾಡಿದರು.

ಅನೇಕ ಕಾರಣಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಶೋಷಣೆ, ದೌರ್ಜನ್ಯ ಮತ್ತು ಅಪಚಾರಗಳಿಗೆ ಒಳಗಾಗುತ್ತಿದ್ದಾಳೆ ಆದ್ದರಿಂದ ಮಹಿಳೆಯರು ರಕ್ಷಣೆಗೆ ಕಾನೂನು ತಿಳಿದುಕೊಂಡರೆ ಸಮಾಜದಲ್ಲಿ ಬದುಕಲು ಸಾಧ್ಯ ಎಂದರು.

ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಚಟುವಟಿಕೆಗಳು, ಕೆಲಸ ನಿರ್ವಹಿಸುವ ಮಹಿಳೆಯರಿಗೆ ಪುರುಷರಿಂದ ದೌರ್ಜನ್ಯ ನಡೆದರೆ ಕಾನೂನಿನ ಮೂಲಕ ಯಾವ ರೀತಿ ಪರಿಹಾರ ಪಡೆಯಬೇಕೆಂದು ತಿಳಿಸಿದರು.  ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದ್ದಲ್ಲದೆ ದುಡಿಯುವ ಮಹಿಳೆಯರಿಗೆ ಮೊದಲು ಕಾನೂನಿನ ಅರಿವಿರಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಜಿ.ಎಸ್ ಮುಖ್ಯ ಶಿಕ್ಷಕಿ  ಎಚ್.ಎಸ್. ಸುಮಿತ್ರ ಮಾತನಾಡಿ, ಶಾಲಾ ಕಾಲೇಜುಗಳ ಹಂತದಲ್ಲಿ ಮಕ್ಕಳಿಗೆ ಹೆಚ್ಚಿನ ಕಾನೂನಿನ ಅರಿವು ಇದ್ದರೆ ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ, ಈ ನಿಟ್ಟಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಶಾಲೆ, ಗ್ರಾಮಗಳಲ್ಲಿ ಉಚಿತವಾಗಿ ಕಾನೂನಿನ ಅರಿವು ಮೂಡಿಸುವ ಕಾರ್ಯವನ್ನು  ಮಾಡುತ್ತಿದ್ದು ಇದರ ಸದುಪಯೋಗ ಪಡೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು. ಮಹಿಳೆಯರು, ಪುರುಷರು ಆರ್ಥಿಕವಾಗಿ, ಸಾಮಾಜಿಕವಾಗಿ, ಸ್ವಾವಲಂಬಿಗಳಾಗಿ ಹೊರಹೊಮ್ಮಿ ದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.

ವಕೀಲ ಶ್ರೀನಿವಾಸ್ ಸೂರಿ ಮಕ್ಕಳ ಹಕ್ಕುಗಳನ್ನು ಕುರಿತು ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯ ಜಗದೀಶ್, ಉಪನ್ಯಾಸಕಿ ದೀಪ, ಅಜ್ಜಯ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.