ಕಡೂರು: ಡಾ.ಡಿ.ಎಂ. ನಂಜುಂಡಪ್ಪ ವರದಿಯಂತೆ ಕಡೂರು ತಾಲ್ಲೂಕು ಅತಿ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಈ ಹಣೆಪಟ್ಟಿಯಿಂದ ಕ್ಷೇತ್ರ ಶೀಘ್ರದಲ್ಲಿ ಹೊರಗೆ ಬರಬೇಕು. ಶಿಕ್ಷಣ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ, ರಸ್ತೆ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಸದರ ನಿಧಿಯಿಂದ ₹ 1 ಕೋಟಿ ಅನುದಾನ ನೀಡುವುದಾಗಿ ಸಂಸದ ಎಚ್.ಡಿ. ದೇವೇಗೌಡ ಪ್ರಕಟಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸ್ಮಾರ್ಟ್ಕ್ಲಾಸ್ ಹಾಗೂ ಬೋಧನಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 2017-18ನೇ ಸಾಲಿಗೆ ಕಡೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹ 1 ಕೋಟಿ ಅನುದಾನ ನೀಡುವಂತೆ ಶಾಸಕ ವೈ.ಎಸ್.ವಿ. ದತ್ತ ಮನವಿ ಮಾಡಿದ್ದಾರೆ. ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕರ ಅನುದಾನದಿಂದ ₹ 18 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಿರುವುದು ಶಿಕ್ಷಣದಲ್ಲಿ ಆಧುನೀಕರಣ ತರುವಲ್ಲಿ ಉತ್ತಮ ಪ್ರಯತ್ನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ‘ತಮ್ಮ ಕ್ಷೇತ್ರದಲ್ಲಿ ಕಡೂರು ಮತ್ತು ಬೀರೂರು ಪಟ್ಟಣ ಹಾಗೂ ಕೆ. ಬಿದರೆ ಗ್ರಾಮದ ಕಾಲೇಜುಗಳಲ್ಲಿ ಒಟ್ಟು 6 ಸ್ಮಾರ್ಟ್ ತರಗತಿಗಳು ಬೋಧನೆಗೆ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲಾಗುವುದು’ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ, ಉಪವಿಭಾಗಾಧಿಕಾರಿ ಸರೋಜ, ಪುರಸಭಾ ಸದಸ್ಯೆ ಪುಷ್ಪಲತಾ ಸೋಮೇಶ್, ಎಪಿಎಂಸಿ ನಿರ್ದೇಶಕ ಲಕ್ಕಪ್ಪ, ನಿವೃತ್ತ ಪ್ರಾಂಶುಪಾಲ ಎಲ್. ಪುಟ್ಟಕರಿಯಪ್ಪ, ಜಿ. ಸೋಮಯ್ಯ, ಭಂಡಾರಿ ಶ್ರೀನಿವಾಸ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಪ್ರಾಂಶುಪಾಲರಾದ ಸಿ. ಜಯಪ್ಪ, ಎ.ಎನ್. ಶೀಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.