ಯಳ್ಳಂಬಳಸೆ(ಕಡೂರು): ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 14ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಪ್ರಸ್ತಾವನೆಗೆ ಮಂಜೂರು ದೊರೆತಿದೆ ಎಂದು ಶಾಸಕ ವೈ.ಸಿ.ವಿಶ್ವನಾಥ್ ತಿಳಿಸಿದರು.
ತಾಲ್ಲೂಕಿನ ಯಳ್ಳಂಬಳಸೆ ಗ್ರಾ.ಪಂ.ಹಾಗೂ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯಳ್ಳಂಬಳಸೆ ಗ್ರಾಮಕ್ಕೆ ಬಿಸಿಎಂ ವಿದ್ಯಾರ್ಥಿ ನಿಲಯ ಮತ್ತು ಸ್ಮಶಾನ ಹಾಗೂ ಯಳ್ಳಂಬಳಸೆ ನಾಲೆಗೆ ಕಾಂಕ್ರಿಟ್ ಹಾಕಿಸಿ ಸುಭದ್ರವಾಗಿ ನಿರ್ಮಿಸಿಕೊಡುವಂತೆ ಶಾಸಕರನ್ನು ಗ್ರಾ.ಪಂ.ಸದಸ್ಯ ವೈ.ಜಿ.ರುದ್ರಯ್ಯ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕನಾಯಕನ ಹಳ್ಳಿ ಗ್ರಾಮದಲ್ಲಿ 3.75ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ, ಯಳ್ಳಂಬಳಸೆ ಗ್ರಾಮದಲ್ಲಿ 8ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿದ ದಾದಿಯರ ವಸತಿಗೃಹ ಮತ್ತು 1.30ಲಕ್ಷ ರೂ ವೆಚ್ಚದ ವಾಣಿಜ್ಯ ಸಂಕೀರ್ಣವನ್ನು ಶಾಸಕರು ಉದ್ಘಾಟಿಸಿ, ಕುಡಿಯುವ ನೀರಿನ ಟ್ಯಾಂಕ್ ಅನ್ನು ರೂ14ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದರು.
ತಾ.ಪಂ.ಅಧ್ಯಕ್ಷೆ ಎ.ಈ.ರತ್ನಾ, ಯಳ್ಳಂಬಳಸೆ ಜಿ.ಪಂ.ಸದಸ್ಯೆ ಶಶಿರೇಖಾ ಸುರೇಶ್, ತಾ.ಪಂ.ಸದಸ್ಯ ವೈ.ಕೆ.ಬಸಪ್ಪ, ಗ್ರಾ.ಪಂ.ಸದಸ್ಯ ಸೈಯದ್ ಸಲೀಂ,ತ್ಯಾಗರಾಜ್ ಗ್ರಾಮದ ಅಭಿವೃದ್ಧಿ ಮತ್ತು ಬೇಡಿಕೆಗಳ ಕುರಿತು ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷೆ ಇಂದ್ರಮ್ಮ ರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷೆ ಆಶಾ ಬಸವರಾಜ್ ಕುಡಿಯುವ ನೀರಿನ ಕೈಪಂಪ್ಗೆ ಚಾಲನೆ ನೀಡಿದರು. ಕವಿತಾ ಜಗದೀಶ್, ವೇದಾವತಿ ಅಣ್ಣಯ್ಯ, ಪ್ರಭುಮೂರ್ತಿ, ರತ್ನಮ್ಮ ಮೂಡಲಗಿರಿಯಪ್ಪ, ಕರಿಯಮ್ಮ ಶೇಖರಪ್ಪ, ಈಶ್ವರಪ್ಪ ಮತ್ತು ಅಧಿಕಾರಿಗಳಾದ ವೆಂಕಟೇಶ್, ಶಂಕರನಾಯ್ಕ, ಗುರುಸಿದ್ದಯ್ಯ, ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.