ADVERTISEMENT

ಕಡೂರು, ಬೀರೂರು: ಮದಗದಕೆರೆ ನೀರು ನೀಡಲು ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:21 IST
Last Updated 5 ಡಿಸೆಂಬರ್ 2012, 5:21 IST

ಕಡೂರು: ಬರಗಾಲದಿಂದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದು,  ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಮೀಪದ ಮದಗದಕೆರೆಯಿಂದ ಬೀರೂರಿನ ಗಾಳಿಹಳ್ಳಿ ಕೆರೆಗೆ ನೀರು ಹಾಯಿಸುವ ಯೋಜನೆ ಜಾರಿಗೆ ತರಲು ಸಾಧಕ ಬಾಧಕಗಳನ್ನು ಅರಿತು ಕಾರ್ಯ ನಿರ್ವಹಿಸುವುದಾಗಿ ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬರಗಾಲ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬೀರೂರು ಪುರಸಭೆ ಅಧ್ಯಕ್ಷ ರಮೇಶ್ ಮಾಡಿದ ಮನವಿಗೆ  ಉತ್ತರಿಸಿದರು.

ಭದ್ರಾನದಿಯಿಂದ ನೀರು ತರುವ ಯೋಜನೆ ನಾಲ್ಕುತಿಂಗಳು ತಡವಾಗಲಿದ್ದು, ಬೀರೂರು ಪಟ್ಟಣದಲ್ಲಿ ಈಗಾಗಲೇ ನೀರಿನ ಹಾಹಾಕಾರದಿಂದ ಸಾರ್ವಜನಿಕರು ಎರಡು ಬಾರಿ ಪ್ರತಿಭಟನೆ ನಡೆಸಿದ್ದರೂ ಪುರಸಭೆ ಸ್ಪಂದಿಸಿಲ್ಲ. ನೀರಿನ ಆಸರೆ ಇರುವ ಎಲ್ಲಾ ಮೂಲಗಳಿಂದ ನೀರು ದೊರಕದೆ ಪರಿತಪಿಸುವಂತಾಗಿದೆ.

ಮದಗದಕೆರೆಯಲ್ಲಿ 60 ಅಡಿಗಳಷ್ಟು ನೀರು ಇದ್ದು, ಸುತ್ತಮುತ್ತಲಿನ ಅಚ್ಚುಕಟ್ಟು ಪ್ರದೇಶದವರು ಭತ್ತ ಬೆಳೆಯದಂತೆ ಮಾಡಿದ ಮನವಿಗೆ ರೈತರು ಒಪ್ಪಿಕೊಂಡಿದ್ದಾರೆ. ಕನಿಷ್ಠ 25 ಅಡಿ ನೀರನ್ನು ಬೀರೂರು ಸಮೀಪದ ಗಾಳಿಹಳ್ಳಿ ಕೆರೆಗೆ ಹರಿಸಿದರೆ, ಸುತ್ತಮುತ್ತಲಿನ ನೂರಾರು ಕೊಳವೆ ಬಾವಿಗಳಿಗೆ ಮತ್ತು ಬೀರೂರು ಪುರಸಭೆ ವಾರ್ಡ್‌ಗಳ 2 ತಿಂಗಳ ನೀರಿನ ಸಮಸ್ಯೆ ಪರಿಹರಿಸ ಬಹುದು ಎಂದು ಬೀರೂರು ಪುರಸಭೆ ಅಧ್ಯಕ್ಷ ರಮೇಶ್ ಶಾಸಕರು ಮತ್ತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಮದಗದಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ಅಡಿಕೆ ಬೆಳೆಗಾರ ಸಂಘಗಳ ಮತ್ತು ಸಣ್ಣ ನಿರಾವರಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ  ಮದಗದಕೆರೆಯ ನೀರನ್ನು ಬೀರೂರು ಗಾಳಿಹಳ್ಳಿ ಕೆರೆಗೆ ತರಲು ಪ್ರಯತ್ನ ಮಾಡಲಾ ಗುವುದಾಗಿ ಭರವಸೆ ನೀಡಿದರು.

ಕಡೂರು ಪುರಸಭೆಯಲ್ಲಿ 15 ದಿನಗಳಿಗೊಮ್ಮೆ ನೀರು ನೀಡುತ್ತಿದ್ದಾರೆ ಎಂದು ಅನೇಕ ನಿವಾಸಿಗಳು ದೂರು ನೀಡಿರುವುದಾಗಿ ಜಿಲ್ಲಾಧಿಕಾರಿ ಮುಖ್ಯಾಧಿ ಕಾರಿಗಳನ್ನು ಪ್ರಶ್ನಿಸಿದರು. ನಾಲ್ಕು ವಾರ್ಡ್‌ಗಳಲ್ಲಿ ಸಮಸ್ಯೆ ತೀವ್ರವಾಗಿದ್ದು ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ನಲ್ಲಿ ನೀರು ನೀಡುತ್ತಿದ್ದು, ಸಾಧ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

ಬೀರೂರು -ಕಡೂರು ಮಧ್ಯೆ ಇರುವ ಅಮೃತ್‌ಮಹಲ್ ತಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆದಿದ್ದು, 160 ಟನ್ ಮೇವು ದಾಸ್ತಾನು ಇದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಪಶು ವೈದ್ಯ ಡಾ.ಲಿಂಗರಾಜು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ 200 ಟನ್ ಮೇವು ಸಂಗ್ರಹಿಸಿ ಮುಂದೆ ಗೋಶಾಲೆ ಗ ನ್ನು ತೆರೆಯುವ ಸಂಭವವಿದೆ ಎಂದು ಸಲಹೆ ನೀಡಿದರು.

ಜಿ.ಪಂ.ಉಪಾಧ್ಯಕ್ಷೆ ಮಾಲಿನಿಬಾಯಿ ರಾಜ ನಾಯ್ಕ, ಜಿ.ಪಂ.ಸದಸ್ಯರಾದ ಶಶಿರೇಖಾ ಸುರೇಶ್,ಪದ್ಮಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಓಂಕಾರ ಮೂರ್ತಿ, ತರೀಕೆರೆ ಉಪವಿಭಾಗಾಧಿಕಾರಿ ಅನುರಾಧ, ತಹಶೀಲ್ದಾರ್ ಬಿ.ಆರ್.ರೂಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಟಿ.ಎನ್. ಮೂರ್ತಿ, ತಾ.ಪಂ.ಉಪಾಧ್ಯಕ್ಷೆ ಶೋಭಾ ವೆಂಕಟೇಶ್, ಬೀರೂರು ಪುರಸಭೆ ಅಧ್ಯಕ್ಷ ರಮೇಶ್, ಬೀರೂರು ಪುರಸಭೆ ಮುಖ್ಯಾಧಿಕಾರಿ ಓಂಕಾರಮೂರ್ತಿ, ಕಡೂರು ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ತಾ.ಪಂ.ಸದಸ್ಯರಾದ ನೀಲಕಂಠಪ್ಪ, ಬಸವರಾಜು, ಬಸಪ್ಪ, ಶಶಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.