ಮೂಡಿಗೆರೆ: ತಾಲ್ಲೂಕಿನ ಬಣಕಲ್ ಹೋಬಳಿಯ ಕೂಡಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ದಾಳಿ ನಡೆಸಿರುವ ಕಾಡಾನೆಗಳು ಬಾಳೆ, ಭತ್ತದ ಬೆಳೆಯನ್ನು ತುಳಿದು ನಾಶ ಮಾಡಿವೆ.
ನಾಲ್ಕೈದು ದಿನಗಳಿಂದಲೂ ಬಣಕಲ್ ಹೋಬಳಿಯಲ್ಲಿ ಬೀಡುಬಿಟ್ಟಿರುವ ನಾಲ್ಕು ಕಾಡಾನೆಗಳು, ರಾತ್ರಿಯಾಗುತ್ತಿದ್ದಂತೆ ಇಂದಿರಾನಗರ, ಬಿ.ಹೊಸಳ್ಳಿ, ಚಕ್ಕಮಕ್ಕಿ, ಕೂಡಳ್ಳಿ ಭಾಗಗಳಲ್ಲಿ ಸಂಚರಿಸುತ್ತಿವೆ.
ಮಂಗಳವಾರ ತಡರಾತ್ರಿ ಕೂಡಳ್ಳಿ ಗ್ರಾಮದ ರೈತ ಶಂಕರೇಗೌಡ ಅವರ ಬಾಳೆ ತೋಟದಲ್ಲಿ ಸಂಚರಿಸಿ ಗೊನೆಬಿಟ್ಟ ಬಾಳೆಯನ್ನು ತಿಂದು ತುಳಿದು ನಾಶಗೊಳಿಸಿವೆ. ಮುಂಜಾನೆ ವೇಳೆಗೆ ಗ್ರಾಮದಿಂದ ಕಾಲ್ಕಿತ್ತಿರುವ ಕಾಡಾನೆಗಳು, ಕೂಡಳ್ಳಿ ಗ್ರಾಮದ ಮಾಧವ, ಆರ್. ಲೋಬೊ, ಡಿ.ಆರ್. ರಾಜು ಅವರ ತೋಟಗಳಲ್ಲಿ ಬೆಳೆ ನಾಶ ಮಾಡಿ ತ್ರಿಪುರ ಕಾಡಿನತ್ತ ತೆರಳಿವೆ. ಆನೆಗಳು ತಿರುಗಾಡಿರುವ ಹೆಜ್ಜೆ ಗುರುತ್ತಿದ್ದು, ಬಣಕಲ್ ಹೋಬಳಿಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.
‘ಭತ್ತದ ಬೆಳೆಯು ಈಗಾಗಲೇ ಕಟಾವಿಗೆ ಬಂದಿದ್ದು, ಆಹಾರವನ್ನು ಹರಸುತ್ತಾ ಬರುವ ಆನೆಗಳು, ಭತ್ತದ ಗದ್ದೆಗಳಿಗೆ ಇಳಿದು ಹಾನಿಗೊಳಿಸುತ್ತಿವೆ. ಅಲ್ಲದೇ ಅಪಾರ ಶ್ರಮ ಹಾಕಿ ಸಾಲ ಮಾಡಿ ಬೆಳೆದಿರುವ ಬಾಳೆ ತೋಟಗಳಿಗೆ ದಾಳಿ ನಡೆಸುತ್ತಿರುವುದು ರೈತರಿಗೆ ಭರಿಸಲಾಗದಷ್ಟು ನಷ್ಟವಾಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯು ಕಾಡಾನೆಗಳನ್ನು ಅರಣ್ಯದತ್ತ ಓಡಿಸಬೇಕು’ ಎಂದು ರೈತ ಶಂಕರೇಗೌಡ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.