ಕಡೂರು: ಕೃಷಿ ಕಾರ್ಯಗಳಲ್ಲಿ ಯಂತ್ರಗಳ ಬಳಕೆ ಮಾಡುವುದರಿಂದ ಕಾರ್ಮಿಕರ ಕೊರತೆಯನ್ನು ನಿವಾರಿಸಿಕೊಳ್ಳಬಹುದು ಎಂದು ದೇವನೂರು ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್ ಹೇಳಿದರು. ತಾಲ್ಲೂಕಿನ ದೇವನೂರಿನ ರೇಣುಕಾಮೂರ್ತಿ ಅವರ ರಾಗಿ ಹೊಲದಲ್ಲಿ ಕೃಷಿ ಇಲಾಖೆ ಗುರುವಾರ ಏರ್ಪಡಿಸಿದ್ದ ರಾಗಿ ಕೊಯ್ಯುವ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.
ದೇವನೂರು ಭಾಗದಲ್ಲಿ ತೃಪ್ತಿಕರವಾಗಿ ಮಳೆಯಾಗಿದ್ದು, ರಾಗಿ ಬೆಳೆ ಸಮೃದ್ಧಿವಾಗಿ ಬಂದಿದೆ. ಆದರೆ, ರಾಗಿ ಕಟಾವು ಮಾಡಲು ಕೂಲಿಕಾರರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಯಂತ್ರದ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಯಂತ್ರಕ್ಕೆ ಕೃಷಿ ಇಲಾಖೆ ಸಹಾಯ ಧನವನ್ನು ನೀಡುತ್ತದೆ.
ಅಲ್ಲದೆ, ಈ ಯಂತ್ರವನ್ನು ಬಾಡಿಗೆ ನೀಡುವುದರ ಮೂಲಕವೂ ಹಣ ಸಂಪಾದಿಸಬಹುದು. ಈ ಯಂತ್ರದಲ್ಲಿ ಅಲ್ಪ ಮಟ್ಟದಲ್ಲಿ ಹಲವು ಬದಲಾವಣೆಗಳು ಆಗಬೇಕಿದೆ ಎಂದರು. ಸಖರಾಯಪಟ್ಟಣ ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜು ಪ್ರಾಸ್ತವಿಕವಾಗಿ ಮಾತನಾಡಿ, ‘ರಾಗಿ ಕಟಾವು ಯಂತ್ರಕ್ಕೆ ಶೇ 50 ಸಹಾಯಧನವಿದ್ದು, ಕೇವಲ ₹ 64 ಸಾವಿರ ಪಾವತಿಸಬೇಕು. ಗ್ರಾಮಕ್ಕೆ ಎರಡು ಯಂತ್ರವಿದ್ದರೆ ಬೆಳೆ ಕಟಾವು ಸುಲಭವಾಗುತ್ತದೆ’ ಎಂದರು.
ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ತಾಲ್ಲೂಕಿನಾದ್ಯಂತ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು ಇಲಾಖೆಯ ಗುರಿಗಿಂತ ಹೆಚ್ಚಿದೆ. ಕಟಾವು ಮಾಡಲು ಸುಲಭವಾಗುವಂತೆ ರಾಗಿ ಕಟಾವು ಯಂತ್ರವನ್ನು ರೈತರಿಗೆ ಇಲಾಖೆ ಸಹಾಯಧನದೊಂದಿಗೆ ನೀಡುತ್ತದೆ.
ರಾಗಿ ಬೆಳೆಯಲ್ಲಿ ಎಲೆ ತಿನ್ನುವ ಕೊಂಡ್ಲಿ ಹುಳುವನ್ನು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಲು ಸಲಹೆ ನೀಡಲಾಗಿದೆ. ಔಷಧವನ್ನು ಇಲಾಖೆಯು ರಿಯಾಯಿತಿ ದರದಲ್ಲಿ ನೀಡುತ್ತಿದೆ’ ಎಂದರು. ಇಲಾಖೆಯ ಅಧಿಕಾರಿ ಕಾಂತರಾಜು ಮಂಜುನಾಥ್ ಮತ್ತು ವರ್ಷ ಅಸೋಸಿಯಟ್ಸ್ ಕಂಪೆನಿಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.