ADVERTISEMENT

ಕೆಟ್ಟು ನಿಂತ ಬಸ್: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 8:33 IST
Last Updated 1 ಡಿಸೆಂಬರ್ 2012, 8:33 IST

ಮೂಡಿಗೆರೆ: ತಾಲ್ಲೂಕು ಕೇಂದ್ರದಿಂದ ದೇವರುಂದಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಶುಕ್ರವಾರ ಮಧ್ಯಾಹ್ನ ಗಂಗನಮಕ್ಕಿಯಲ್ಲಿ ಕೆಟ್ಟುನಿಂತು  ಗಂಟೆ ಕಳೆದರೂ ಕ್ರಮ ಕೈಗೊಳ್ಳದ ಸಾರಿಗೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಕೆ.ಎಂ. ರಸ್ತೆಯಲ್ಲಿ ರಸ್ತೆ ನಡೆಸಿ ಪ್ರತಿಭಟಿಸಿದರು.

ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಮೂಡಿಗೆರೆ-ದೇವರುಂದ ಬಸ್ ಗಂಗನಮಕ್ಕಿಯಲ್ಲಿ ಕೆಟ್ಟು ನಿಂತಿತು. ಬದಲಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಬಸ್ ನಿಲ್ದಾಣದ ನಿಯಂತ್ರಕರಿಗೆ ಮತ್ತು ಘಟಕ ವ್ಯವಸ್ಥಾಪಕರಿಗೆ ತಿಳಿಸಿ ಗಂಟೆ ಕಳೆದರೂ ನೆರವಿಗೆ ಬಾರದಿದ್ದನ್ನು ಪ್ರಶ್ನಿಸಿ ಸ್ಥಳ ದಲ್ಲಿಯೇ ರಾಜ್ಯ ಹೆದ್ದಾರಿ ಕೆ.ಎಂ ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು ತಡೆಹಿಡಿದು, ಪ್ರತಿಭಟಿಸಿದರು. ಇದರಿಂದಾಗಿ ದೂರದ ಊರುಗಳಿಂದ ಧರ್ಮಸ್ಥಳ, ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರು  ಮತ್ತು ಶಾಲೆಯಿಂದ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಇತ್ತೀಚಿಗೆ  ಮೂಡಿಗೆರೆ ಘಟಕದ ಬಸ್‌ಗಳ ಸ್ಥಿತಿ ಹದಗೆಟ್ಟಿದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್‌ಗಳು, ಅಲ್ಲಲ್ಲಿಯೆ ಕೆಟ್ಟು ನಿಲ್ಲುವ ಪ್ರಸಂಗಗಳು ನಡೆಯುತ್ತಿವೆ. ಉತ್ತಮ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳದಲ್ಲಿದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಿಯ ಪೊಲೀಸರ ನೆರವಿನಲ್ಲಿ ಬದಲಿ ಬಸ್‌ನ ವ್ಯವಸ್ಥೆ ಕಲ್ಪಿಸಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.