ADVERTISEMENT

ಕೆರೆ ಕಳಪೆ ಕಾಮಗಾರಿ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 8:00 IST
Last Updated 4 ಜೂನ್ 2011, 8:00 IST

ಕಡೂರು: ತಾಲ್ಲೂಕಿನ ನಿಡಘಟ್ಟದ ಲಕ್ಷ್ಮಯ್ಯ ಕೆರೆ ನಿರ್ಮಾಣ ಕಳಪೆ ಕಾಮಗಾರಿಯಿಂದ ಕೂಡಿದ್ದು ಸುತ್ತಮುತ್ತಲಿನ 15 ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ  ಲೋಕಾಯುಕ್ತರಿಗೆ ದೂರು ನೀಡಿರುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎನ್.ಎಸ್.ಹೇಮಾವತಿ ಆರೋಪಿಸಿದ್ದಾರೆ.    
 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಧರ್ಮೇಗೌಡರು ಶಾಸಕರಾದ ಸಂದರ್ಭದಲ್ಲಿ ನೂತನ ಕೆರೆ ನಿರ್ಮಿಸಲು ಸರ್ಕಾರದಿಂದ 97 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸ್ದ್ದಿದರು. ನಂತರ ಬಂದ ಸರ್ಕಾರ ಕೆರೆಯ ನಿರ್ಮಾಣಕ್ಕೆ ಕೇವಲ 35 ಲಕ್ಷ ರೂಗಳನ್ನು ಬಿಡುಗಡೆ ಮಾಡಿ ಸಣ್ಣ ನೀರಾವರಿ ಇಲಾಖೆಗೆ ಕಾಮಗಾರಿ ಒಪ್ಪಿಸಿತು.
 
ಆದರೆ ಕಳಪೆ ಕಾಮಗಾರಿ ಪರಿಣಾಮ ಮಳೆಯ ನೀರು ಸಹ ನಿಲ್ಲಲು ಅವಕಾಶವಿಲ್ಲದ ರೀತಿಯಲ್ಲಿ ನಿರ್ಮಿಸಿದ್ದು ಇದಕ್ಕೆ ಹೆಚ್ಚೆಂದರೆ 8 ರಿಂದ 10 ಲಕ್ಷ ರೂಗಳು ಮಾತ್ರ ವಿನಿಯೋಗಿಸಿರಬಹುದೆಂದು ಆರೋಪಿಸಿದ್ದಾರೆ. ಉಳಿದ ಬಾಕಿ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಈ ಕೆರೆಯ ನೀರು ನಾಗರಾಳು, ಚಟ್ನಹಳ್ಳಿ, ಬೈರಪ್ಪನಹಳ್ಳಿ, ತಿಪ್ಪನಹಳ್ಳಿ, ಚನ್ನನಕೊಪ್ಪಲು, ಗಾಂಧಿನಗರದಟ್ಟಿಯ ಸಾವಿರಾರು ಎಕರೆಗೆ ಉಪಯೋಗವಾಗಲಿದ್ದು, ಇಲ್ಲಿನ ಜನರು ಕಳಪೆ ಕಾಮಗಾರಿ ಖಂಡಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೆರೆಯ ಕಾಮಗಾರಿ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಏಳು ಗ್ರಾಮಗಳ ಗ್ರಾಮಸ್ಥರು ಶಾಸಕ ಸಿ.ಟಿ.ರವಿಯವರ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ ಹಾರಿಕೆ ಉತ್ತರ ನೀಡಿ ಜಾಗ ಖಾಲಿಮಾಡಿದ್ದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಮಾವತಿ ಆರೋಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.