ADVERTISEMENT

ಕ್ಷೇತ್ರ ಅಭಿವೃದ್ಧಿ ಭರವಸೆ; ಗೆಲ್ಲುವ ವಿಶ್ವಾಸ

ಎರಡನೇ ದಿನವೂ ನಾಮಪತ್ರ ಸಲ್ಲಿಕೆ ಭರಾಟೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 12:39 IST
Last Updated 17 ಏಪ್ರಿಲ್ 2013, 12:39 IST

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಎರಡನೇ ದಿನವೂ ಮುಂದುವರಿಯಿತು.

ಬಿಜೆಪಿ, ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳೊಂದಿಗೆ ಪಕ್ಷೇತರರೂ ಸಹ ಅಧಿಕ ಸಂಖ್ಯೆ ಯಲ್ಲಿ ನಾಮಪತ್ರ ಸಲ್ಲಿಸಿದರು. ಉಳಿದ ಅಭ್ಯರ್ಥಿ ಗಳು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

`ಪಕ್ಷದಲ್ಲಿ ಯುವಕರಿಗೆ ಆದ್ಯತೆ'
ತರೀಕೆರೆ: ಬಿಜೆಪಿ ಅಭ್ಯರ್ಥಿ ಟಿ.ಜೆ.ಅವಿನಾಶ್ ಮಂಗಳವಾರ ಪಟ್ಟಣದ ಸಾಲುಮರದಮ್ಮ ದೇವಸ್ಥಾನದಿಂದ  ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ,ಮೆರವಣಿಗೆ ಮೂಲಕ ಸಾಗಿ ಚುನಾವಣಾಧಿಕಾರಿ ಜಿ. ಅನುರಾಧಾ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, `ಪಕ್ಷ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ  ಸಾಮಾನ್ಯ ಕಾರ್ಯಕರ್ತನಾದ  ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ.

ತಾಲ್ಲೂಕಿಗೆ ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸುವ, ಗ್ರಾಮೀಣ ಭಾಗದ ಮೂಲ ಸೌಕರ್ಯ ಒದಗಿಸುವ ಉದ್ದೇಶಹೊಂದಿ ರುವು ದಾಗಿ ತಿಳಿಸಿದರು. ಬಿಜೆಪಿಗೆ ಪ್ರತಿಸ್ಪರ್ಧಿ  ಕಾಂಗ್ರೆಸ್ ವಿನಃ ಕೆಜೆಪಿ ಅಲ್ಲ ಎಂದು ತಿಳಿಸಿದರು

ನಂತರ  ಪಕ್ಷದ ಕಚೇರಿಯಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಪ್ರಾಣೇಶ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ್ದು ಒಡೆದು ಆಳುವ ನೀತಿ. ಆದರೆ ಬಿಜೆಪಿ ಪಕ್ಷದ್ದು ಒಂದೂಗೂಡಿ ಬಾಳು ವುದಾಗಿದೆ. ಬಿಜೆಪಿ ಸರ್ಕಾರದಲ್ಲಿ ಆಗಿರುವ  ಅಭಿವೃದ್ದಿ  ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಿರಕ್ಷೆ ಆಗಲಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯ ಕರ್ತರೇ  ಪಕ್ಷದ ಜೀವಾಳ. ಹಾಗಾಗಿ ವಲಸಿಗರಿಗೆ ಮತ್ತು ಭ್ರಷ್ಟರಿಗೆ ಈ ಬಾರಿ ಎಲ್ಲಿಯೂ ಸಹಾ ಟಿಕೆಟ್ ನೀಡದೇ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ಟಿಕೇಟ್ ನೀಡಿದೆ  ಎಂದು ತಿಳಿಸಿದರು.

ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಎನ್. ಮಂಜುನಾಥ ಮಾತನಾಡಿ, ಅಭ್ಯರ್ಥಿಯ ಬಗ್ಗೆ ವಿರೋಧಿಗಳು ಇಲ್ಲ ಸಲ್ಲದ ಪುಕಾರು ಹಬ್ಬಿಸುತ್ತಿದ್ದು, ಅದಕ್ಕೆ ಮುಂದಿನ ದಿನಗಳಲ್ಲಿ ಮತದಾರ ತಕ್ಕ ಉತ್ತರ ನೀಡಲಿದ್ದಾನೆ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ , ರೇಖಾ ಹುಲಿಯಪ್ಪ ಗೌಡ, ದೇವಾನಂದ, ಕಾಮನ ಕೆರೆ ಶಶಿಧರ್ , ಬಿಜೆಪಿ ಮುಖಂಡರಾದ ಎಂ.ಆರ್. ಲೋಹಿತ್, ವಿನಾಯಕ್, ಮೋಹನ್ ಕುಮಾರ್, ಕಾರ್ಯದರ್ಶಿ ಸದಾನಂದ ಇನ್ನಿತರರು ಭಾಗವಹಿಸಿದ್ದರು,

ಸಿಪಿಐ (ಎಂ.ಎಲ್) ಅಭ್ಯರ್ಥಿ ಕಣಕ್ಕೆ
ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಚುನಾ ವಣೆಗೆ ಮಂಗಳವಾರ ಸಿಪಿಐ (ಎಂ.ಎಲ್) ಪಕ್ಷದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತಾಲ್ಲೂಕಿನ ಗೋಣಿಬೀಡು ಹೋಬಳಿಯ ಅಗ್ರಹಾರದ ಶಂಕ್ರಪುರ ಗ್ರಾಮದ ಕುಮಾರ್ ಎಂಬುವವರು ಸಿಪಿಐ ಎಂ.ಎಲ್. (ರೆಡ್‌ಸ್ಟಾರ್) ಅಧಿಕೃತ ಅಭ್ಯರ್ಥಿಯಾಗಿ ಹಾಗೂ ತಾಲ್ಲೂಕಿನ ಬಣಕಲ್ ಹೋಬಳಿಯ ಬಿ. ಹೊಸಹಳ್ಳಿಯ ಬೆಳಗೋಡು ಗ್ರಾಮದ ಗೋಪಾಲ ಎಂಬು ವವರು ಸಿಪಿಐ (ಎಂ.ಎಲ್) ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಎರಡೂ ಅಭ್ಯರ್ಥಿಗಳ ಕಡೆಗಿನ ಸುಮಾರು ಐವತ್ತಕ್ಕೂ ಹೆಚ್ಚು ಬೆಂಬಲಿಗರು ಒಟ್ಟಾಗಿ ತಾಲ್ಲೂಕು ಕಚೇರಿಯವರೆಗೆ ಆಗಮಿಸಿ,  ಚುನಾವಣಾಧಿಕಾರಿ ಡಾ. ಆರ್. ಪ್ರಶಾಂತ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯಲ್ಲಿ ಮೊದಲು ಕುಮಾರ್ ತಮ್ಮ ನಾಲ್ವರು ಸೂಚಕರೊಂದಿಗೆ ಕೇಂದ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರೆ, ನಂತರದಲ್ಲಿ ಗೋಪಾಲ್ ತಮ್ಮ ನಾಲ್ವರು ಸೂಚಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ  ಸಿಪಿಐ (ಎಂ.ಎಲ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಐ.ಎಂ. ಪೂಣೇಶ್ ಇದ್ದರು.

ಈ ಇಬ್ಬರೂ ಅಭ್ಯರ್ಥಿಗಳು ಸೇರಿದಂತೆ ಮೂಡಿಗೆರೆ ವಿಧಾನ ಸಭಾ ಚುನಾವಣೆಗೆ ಒಟ್ಟು ಏಳು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದರೆ, ನಾಮಪತ್ರ ಸಲ್ಲಿಸಲು ಬುಧವಾರ ಅಂತಿಮ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸದ ವಿವಿಧ ಪಕ್ಷಗಳು ನಾಮಪತ್ರ ಸಲ್ಲಿಕೆಗೆ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.