ಅಜ್ಜಂಪುರ: ಜಿಲ್ಲೆಯ ದೊಡ್ಡ ಹೋಬಳಿಯಲ್ಲಿ ಒಂದಾಗಿರುವ ಅಜ್ಜಂಪುರ ಗ್ರಾಮ ಪಂಚಾಯಿತಿಯಲ್ಲಿ 9 ವಾರ್ಡ್ಗಳಿವೆ. 26 ಜನ ಸದಸ್ಯರೂ ಇದ್ದಾರೆ. ಇದೆಲ್ಲಕ್ಕಿಂತ ಪ್ರಮುಖವಾಗಿ ‘ನಿರ್ಮಲ ಗ್ರಾಮ ಪುರಸ್ಕಾರ’ ಸಹ ಬಂದಿದೆ. ಆದರೆ ಗ್ರಾ.ಪಂ ವ್ಯಾಪ್ತಿಯ ಚರಂಡಿಗಳು ಮಾತ್ರ ಕಸ ಸಂಗ್ರಹವಾಗಿ ದುರ್ನಾತ ಬೀರುತ್ತಿವೆ.
18 ಸಾವಿರ ಜನಸಂಖ್ಯೆಯ ಗ್ರಾ.ಪಂ.ನಲ್ಲಿ ಈಗ ಚುನಾವಣೆ ಕಾವು ಏರತೊಡಗಿದೆ. ಆದರೆ ಈಗಾಗಲೇ ಇರುವ ಜನಪ್ರತಿನಿಧಿಗಳಿಗೆ ಮಾತ್ರ ಸ್ವಚ್ಛತೆ ಬಗ್ಗೆ ದಿವ್ಯ ನಿರ್ಲಕ್ಷ್ಯ. ಇದರಿಂದ ಜನತೆ ಮಾತ್ರ ಹಿಡಿಶಾಪ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ವಾಸನೆ ಮಾತ್ರ ಪುಕ್ಕಟೆ. ಗ್ರಾ.ಪಂ. ಚುನಾವಣೆಗೆ ಇದೇ 25ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಗ್ರಾ. ಪಂ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಜನ ಪರಿತಪಿಸುತ್ತಿದ್ದಾರೆ.
ಸದ್ಯಕ್ಕೆ ಗ್ರಾ.ಪಂ.ಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಇದ್ದಾರೆ. ಆದರೆ ಅವರು ಜನರ ಸೇವೆಗೆ ಇಲ್ಲ ಎಂಬುದನ್ನು ಈಗಾಗಲೇ ತೋರಿಸಿದ್ದಾರೆ. ಬೀದಿಯ ಚರಂಡಿ ಸ್ವಚ್ಛ ಮಾಡಿಸಿ ಎಂದು ಗ್ರಾಮಸ್ಥರು ಹೇಳಿದರೆ ಪಿಡಿಒ ಮಲ್ಲೇಶಪ್ಪ ‘ಗ್ರಾ.ಪಂ. ಚುನಾವಣೆ ದಿನಾಂಕ ಹೊರಬಿದ್ದಿದ್ದರಿಂದ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಕೇವಲ 3 ರಿಂದ 4 ಕಾರ್ಮಿಕರು ಬರುತ್ತಿದ್ದಾರೆ. ನಾವು ಏನು ಮಾಡುವುದಕ್ಕೆ ಆಗುವುದಿಲ್ಲ’ ಎಂದು ಉಡಾಫೆಯ ಮಾತನಾಡುತ್ತಾರೆ. ಗ್ರಾ.ಪಂ.ನಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೇ ಇಂತಹ ಮಾತುಗಳನ್ನು ಆಡುವುದು ಸರಿಯಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಗ್ರಾಮದಲ್ಲಿ ಚುನಾವಣೆಯ ರಂಗೇರಿದ ಕಾರಣದಿಂದ ಸ್ವಚ್ಛತೆ ಹೋಯಿತು ಎಂಬ ಮಾತು ಕೇಳಿಬರುತ್ತಿದೆ. ಕೇವಲ ಆಯ್ದ ಗ್ರಾಮದ ಬೀದಿ ಕಸವನ್ನು ಮಾತ್ರ ಗುಡಿಸಲಾಗುತ್ತದೆ, ಇನ್ನುಳಿದ ರಸ್ತೆ ಕಡೆ ನೋಡುವವರಿಲ್ಲ. ಬೀದಿದೀಪ ಅಲಲ್ಲಿ ಕೆಟ್ಟು ಹೋಗಿವೆ. ಕುಡಿಯುವ ನೀರು ಬಿಡುವಲ್ಲಿಯೂ ನಿರ್ಲಕ್ಷ್ಯ ವಹಿಸಲಾಗಿದೆ.
8 ರಿಂದ 10 ದಿನಗಳಿಗೊಮ್ಮೆ ನೀರಿನ ಭಾಗ್ಯ ಜನರಿಗೆ. ಕೆಲವು ಬಾರಿ ನೀರು ಬಿಟ್ಟರೆ ಇಡೀ ರಾತ್ರಿಯೆಲ್ಲಾ ಬರುತ್ತದೆ. ಆಗೆಲ್ಲ ಮೂರು ದಿಗಳಿಗೆ ಆಗುವ ನೀರು ಒಂದು ರಾತ್ರಿಯಲ್ಲಿ ಪೋಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.