ಚಿಕ್ಕಮಗಳೂರು: ‘ಟಿಪ್ಪು ಅವರೊಬ್ಬ ಮತಾಂಧರಾಗಿದ್ದರು. ಅವರು ನಮ್ಮ ಸಂಸ್ಕೃತಿ, ನಾಗರಿಕತೆ ನಾಶ ಮಾಡಿದ್ದು ನಿಜ. ಹೀಗಾಗಿ, ಅವರ ಜಯಂತ್ಯುತ್ಸವ ಆಚರಿಸುವ ಅಗತ್ಯವಿಲ್ಲ ಎಂಬುದು ನಮ್ಮ ನಿಲುವು’ ಎಂದು ಬಿಜೆಪಿ ರಾಜ್ಯ ವಕ್ತಾರರಾದ ತೇಜಸ್ವಿನಿ ರಮೇಶ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ‘ಟಿಪ್ಪು ಕೊಡಗಿನ ಕೊಡವರು, ಮಂಗಳೂರಿನ ನೆತ್ತರಕೆರೆಯ ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ್ದರು. ಟಿಪ್ಪು ಜಯಂತ್ಯುತ್ಸವ ಆಚರಣೆಗೆ ಕೊಡವರು, ಮಂಗಳೂರಿನ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಜನರಿಗೆ ನೋವು ಉಂಟುಮಾಡುವಂಥ ಆಚರಣೆ ಮಾಡಿ ಅವರ ಗಾಯಗಳ ಮೇಲೆ ಮತ್ತಷ್ಟು ಬರೆ ಎಳೆಯುವ ಅಗತ್ಯ ಇಲ್ಲ’ ಎಂದು ಸಮರ್ಥಿಸಿಕೊಂಡರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ಸೇವಿಸಿ ಧರ್ಮಸ್ಥಳದ ಮಂಜುನಾಥ ದೇಗುಲ ಪ್ರವೇಶಿಸಿರುವುದರಲ್ಲಿ ಆಶ್ಚರ್ಯ ಏನೂ ಇಲ್ಲ. ಅವರು ಮಾಂಸವನ್ನು ತಿಂದು ಅಥವಾ ಕೊರಳಿಗೆ ನೇತು ಹಾಕಿಕೊಂಡು ದೇಗುಲ ಪ್ರವೇಶಿಸಲಿ. ಅದು ಅವರ ವೈಯುಕ್ತಿಕ ವಿಚಾರ. ಅದರ ಬಗ್ಗೆ ಜನತೆಯಾಗಲಿ, ದೇವರಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಉತ್ತರಿಸಿದರು.
‘ಸಿದ್ದರಾಮಯ್ಯ ದೈವಭಕ್ತರಲ್ಲ. ಅವರು ನಮ್ಮ ಪರಂಪರೆ, ಆಚರಣೆ, ಧರ್ಮದ ವಿರೋಧಿ. ಮೈಸೂರು ಅರಮನೆ, ರಾಜವಂಶಸ್ಥರ ವಿರುದ್ಧ ಸತತವಾಗಿ ಹೋರಾಟ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ದೇವರು, ಹಿಂದೂ ಧರ್ಮ ಅವಹೇಳನ ಮಾಡುವ ಕೆ.ಎಸ್.ಭಗವಾನ್ ಅಂಥವರ ಪರವಾದ ನಿಲುವುಗಳನ್ನು ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಅವರ ನಡೆನುಡಿ ಆಶ್ಚರ್ಯ ಎನಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.