ADVERTISEMENT

ದೆಹಲಿ ಸ್ಫೋಟ: ವಕೀಲರ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 9:15 IST
Last Updated 9 ಸೆಪ್ಟೆಂಬರ್ 2011, 9:15 IST

ಚಿಕ್ಕಮಗಳೂರು: ದೆಹಲಿ ಹೈಕೋರ್ಟ್ ಬಳಿ ನಡೆದಿರುವ ಬಾಂಬ್ ಸ್ಫೋಟವನ್ನು ಖಂಡಿಸಿ ಗುರುವಾರ ವಕೀಲರು ಕೆಂಪು ಪಟ್ಟಿಧರಿಸಿ ಕಾರ್ಯನಿರ್ವಹಿಸಿದರು.

  ದೆಹಲಿ ಸ್ಫೋಟವನ್ನು ವಕೀಲರ ಸಂಘದ ನೇತೃತ್ವದಲ್ಲಿ ಸಭೆ ನಡೆಸಿ ಖಂಡಿಸಲಾಯಿತು ಎಂದು ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ತಿಳಿಸಿದರು.  ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಖಜಾಂಚಿ ಅಬ್ದುಲ್ ಮಜೀದ್ ಖಾನ್ ಸೇರಿದಂತೆ ಹಿರಿಯ ವಕೀಲರು ಸಭೆಯಲ್ಲಿ ಭಾಗವಹಿಸಿದ್ದರು.

ಖಂಡನೆ: ಬುಧವಾರ ನಡೆದ ಬಾಂಬ್ ಸ್ಫೋಟವನ್ನು ಜಿಲ್ಲಾ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಕ್ಬರ್ ಅಹಮದ್ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಭದ್ರತಾ ವ್ಯವಸ್ಥೆ ಲೋಪವನ್ನು ತೋರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿ,  ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಬೇಕೆಂದು ಅವರು ಮನವಿ ಮಡಿದ್ದಾರೆ.

ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ 
ಕಡೂರು:
ದೆಹಲಿ ಬಾಂಬ್ ಸ್ಪೋಟದಿಂದ ಅಮಾಯಕರು ಬಲಿಯಾಗಿರುವುದನ್ನು ಖಂಡಿಸಿ ಕಡೂರು ವಕೀಲರ ಸಂಘ ಕಲಾಪ ಬಹಿಷ್ಕರಿಸಿ ಗುರುವಾರ ಪ್ರತಿಭಟಿನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.

ವಕೀಲರ ಸಂಘ  ರಾಜ್ಯ ಸಂಘದ ಆದೇಶದಂತೆ ಸಭೆ ಸೇರಿ ಕಲಾಪಗಳಿಗೆ ಬಹಿಷ್ಕರಿಸಿ ಭಯೋತ್ಪಾದನೆ ಮತ್ತು ಉಗ್ರರನ್ನು ನಿಗ್ರಯಿಸಬೇಕೆಂದು ಒತ್ತಾಯಿಸಿ  ರಾಷ್ಟ್ರಪತಿಗಳಿಗೆ ಕಳುಹಿಸಲು ಮನವಿ ಮಾಡಿದರು. 

ರಾಜೀವ್ ಗಾಂಧಿ ಹತ್ಯೆಯ ಹಂತಕರನ್ನು ನ್ಯಾಯಾಲಯ ಮರಣ ದಂಡನೆಗೆ ಗುರಿ ಮಾಡಿದರೆ ತಮಿಳುನಾಡಿನ ವಿಧಾನಸಭೆಯಲ್ಲಿ ಶಾಸಕರು ತಡೆ ಹಿಡಿಯಲು ಮನವಿ ಮಾಡಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು.

ಭ್ರಷ್ಟರ ವಿರುದ್ಧ ನ್ಯಾಯಾಲಯ ಕ್ರಿಯಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಲಯದ ಆವರಣಗಳಲ್ಲಿ ಉಗ್ರರು ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಜೆ.ಮಂಜುನಾಥ್, ಕಾರ್ಯದರ್ಶಿ ಗೋವಿಂದಸ್ವಾಮಿ, ವಕೀಲರಾದ ರಾಜಣ್ಣ ಸ್ಪೋಟವನ್ನು ಖಂಡಿಸಿದರು.ವಕೀಲರು ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿ ಮನವಿ ಸಲ್ಲಿಸಿದರು. 
ಎಬಿವಿಪಿ ಖಂಡನೆ: ದೆಹಲಿ  ಹೈಕೋರ್ಟ್ ಬಳಿ ಸಂಭವಿಸಿದ ಬಾಂಬ್‌ಸ್ಫೋಟವನ್ನು ಶೃಂಗೇರಿ ಎಬಿವಿಪಿ ಕಾರ್ಯಕರ್ತರು ಖಂಡಿಸಿದ್ದಾರೆ. 

 ಕೇಂದ್ರ ಸರ್ಕಾರದ ಗೃಹ ಇಲಾಖೆ ವೈಫಲ್ಯದಿಂದಲೇ ಸ್ಫೋಟ ನಡೆದಿದೆ.  ಅಫ್ಜಲ್ ಗುರು ಹಾಗೂ ಕಸಬ್‌ನಂತಹ ಉಗ್ರರನ್ನು ಕೇಂದ್ರ ಸರ್ಕಾರ ಪೋಷಿಸುವುದನ್ನು ಬಿಟ್ಟು  ಅವರನ್ನು ಗಲ್ಲಿಗೇರಿಸಿ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಬೇಕೆಂದು ತಾಲ್ಲೂಕು ಎಬಿವಿಪಿ ಸಂಚಾಲಕ ಎಸ್. ರಂಜಿತ್ ಗುರುವಾರ ಪತ್ರಿಕಾ ಹೇಳಿಕೆಯ್ಲ್ಲಲಿ ಅಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.