ADVERTISEMENT

ದೌರ್ಜನ್ಯ ತಡೆಯಲು ಜಾಗೃತರಾಗಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:05 IST
Last Updated 18 ಫೆಬ್ರುವರಿ 2011, 9:05 IST

ತರೀಕೆರೆ: ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಹತ್ತಿಕ್ಕಲು ಹೆಣ್ಣು ಮಕ್ಕಳು ಜಾಗೃತರಾಗಿ ತಮ್ಮ ಉಳಿವಿಗಾಗಿ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಬೇಕಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರತಿಭಾ ವೇದಿಕೆ ವಾರ್ಷಿ ಕೋತ್ಸವ  ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆ ರೂಪಿಸಿದ್ದು, ಅವುಗಳ ಸದುಪಯೋಗವನ್ನು ಪಡೆಯುವ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಪೋಷಕರು ಮುಂದಾಗಬೇಕು ಎಂದರು.ವಿದ್ಯಾರ್ಥಿಗಳು ರಚಿಸಿದ ಕೈಬರಹದ ಕೈಪಿಡಿಯನ್ನು ಬಿಡುಗಡೆ ಮಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಬಿ.ವಿ.ಸರೋಜ ಮಾತನಾಡಿ, ಜಿಲ್ಲೆಯಲ್ಲಿ 77 ಪದವಿ ಪೂರ್ವ ಕಾಲೇಜುಗಳಿದ್ದು, ತಾಲ್ಲೂಕಿನಲ್ಲಿರುವ 9 ಕಾಲೇಜುಗಳಲ್ಲಿ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಜಾನಪದ ಕಲಾವಿದ ಮೆಣಸಿನಕಾಯಿ ಹೊಸಳ್ಳಿ ಚೌಡಿಕೆ ಸಿದ್ರಾಮಣ್ಣ ತಮ್ಮ ವಿಶಿಷ್ಟ ಶೈಲಿಯಲ್ಲಿ ಚೌಡಿಕೆ ಪದಗಳ ಮೂಲಕ ವಿದ್ಯಾರ್ಥಿಗಳಿಗೆ ಓದಿನ ಮಹತ್ವ ತಿಳಿಸಿದರು. ಕಾಜೀಜಿನ ಪ್ರಾಚಾರ್ಯ ಎನ್.ಡಿ. ನಾಗ ರಾಜ್, ಉಪ ಪ್ರಚಾರ್ಯ ದೇವರಾಜ್, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅಲಿಸ್ ಡಿ ಕಾಸ್ಟಾ, ಶಾಲಾಭಿವೃದ್ಧಿ ಸಮಿತಿ ಯಶೋಧರ ಮೂರ್ತಿ, ನಾಗರತ್ನ, ಕಾಂತರಾಜ್, ಪುರಸಭಾ ಸದಸ್ಯ ಸದಾನಂದ, ಎಪಿಎಂಸಿ ನಿರ್ದೇಶಕ ಶಿವಕುಮಾರ್, ಉ ನ್ಯಾಸಕ ಎಚ್.ಎಸ್.ರುದ್ರೇಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಅಮೂಲ್ಯ, ಚೈತ್ರ ಮತ್ತು ಪೂಜಾ ಇದ್ದರು.

ವಸತಿಗೃಹಕ್ಕೆ 16ಕೋಟಿ
ತರೀಕೆರೆ: ತಾಲ್ಲೂಕಿನಲ್ಲಿರುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿಗೃಹಗಳನ್ನು ಮತ್ತು ಹೋಟೆಲ್ ನಿರ್ಮಿಸಲು ರಾಜ್ಯ ಸರ್ಕಾರ ರೂ 16 ಕೋಟಿ ಹಣ ಮಂಜೂರು ಮಾಡಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಗುರುವಾರ ತಿಳಿಸಿದರು.ಕೆಮ್ಮಣ್ಣುಗುಂಡಿ ಪ್ರದೇಶದ ಸರ್ವಾಂಗಿಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂ 45 ಕೋಟಿಹಣವನ್ನು ನಿಗದಿ ಪಡಿಸಿದ್ದು, ಕಳೆದ ವರ್ಷ ಕಾಂಕ್ರಿಟ್ ರಸ್ತೆ ನಿರ್ಮಿಸಲು ರೂ 9 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.