ಚಿಕ್ಕಮಗಳೂರು: ಪಿಳ್ಳೇನಹಳ್ಳಿಯ ಸೇತುವೆ ನಿರ್ಮಾಣಕ್ಕೆ ₹1 ಕೋಟಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿಯಲ್ಲಿ ಈಚೆಗೆ ಹೂಡಿದ್ದ ಗ್ರಾಮವಾಸ್ತವ್ಯದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ₹8 ಕೋಟಿ ವೆಚ್ಚದಲ್ಲಿ ಪಿಳ್ಳೇನಹಳ್ಳಿ ಅಭಿವೃದ್ಧಿಗೆ ಕಾಮಗಾರಿ ನಡೆಸಲಾಗಿದೆ. ಮೂಲ ಸೌಕರ್ಯ ಒದಗಿಸಲಾಗಿದೆ. ಗ್ರಾಮದಲ್ಲಿನ ಶಾಲೆಯ ಹೆಂಚುಗಳು ಹಾಳಾಗಿದ್ದು ದುರಸ್ತಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಶುದ್ಧಗಂಗಾ ಕುಡಿಯುವ ನೀರಿನ ಘಟಕ ಕಳಪೆ ಗುಣ ಮಟ್ಟದಿಂದ ಕೂಡಿವೆ ಎಂದು ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಆರೋಪಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕವನ್ನು 5 ವರ್ಷ ಗುತ್ತಿಗೆದಾರನೇ ನಿರ್ವಹಣೆ ಮಾಡಬೇಕು. ಘಟಕದಲ್ಲಿ ದುರಸ್ತಿ ಕೆಲಸಗಳಿದ್ದರೆ ಶೀಘ್ರವಾಗಿ ಮಾಡಬೇಕು. ಇಲ್ಲವಾದಲ್ಲಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು. ಗ್ರಂಥಾಲಯ ಆರಂಭಿಸಬೇಕು. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಸಂತಾ ಅನಿಲ್ ಕುಮಾರ್, ಬಿ.ಜೆ.ಸೋಮಶೇಖರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್.ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಸುಧಾ, ಸದಸ್ಯರಾದ ರತ್ನಾಕರ್, ಜೈಕುಮಾರ್, ರಮೇಶ್, ಶೇಖರ್ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.