ADVERTISEMENT

ಪ್ರತಿಧ್ವನಿಸಿದ ಗ್ರಾಮಗಳ ವಿದ್ಯುತ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 10:05 IST
Last Updated 8 ಆಗಸ್ಟ್ 2012, 10:05 IST

ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಕೊರತೆಯ ಸಮಸ್ಯೆ ಪ್ರತಿಧ್ವನಿಸಿ ಚರ್ಚೆಗೆ ಗ್ರಾಸವಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಜಿ. ನಾಗರಾಜ್ ತಾಲ್ಲೂಕಿನ ಕಾನೂರು, ಕಟ್ಟಿನಮನೆ, ಹಂತುವಾನಿ, ಸಿಗುವಾನಿ ಗ್ರಾಮಗಳಲ್ಲಿ ಕಳೆದ ಒಂದುವಾರದಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮಸ್ಥರು ಪ್ರತಿಭಟನೆ ನಡೆಸಲು ಸಿದ್ದರಾಗಿದ್ದು ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸಿ ವರದಿ ನೀಡುವಂತೆ ಮೆಸ್ಕಾಂ ಎಂಜಿನಿಯರ್‌ಗೆ ಸೂಚಿಸಿದರು. ಸ್ವಲ್ಪ ಮಳೆ ಬಂದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ತರಾಟೆಗೆ ತೆಗೆದುಕೊಂಡರು.

ನಾಟಿ ಯಂತ್ರದ ಸಹಾಯದಿಂದ ಭತ್ತದ ಗದ್ದೆಗಳನ್ನು ನಾಟಿ ಮಾಡಿಸಿದರೆ ಒಂದು ಎಕರೆಗೆ ರೂ.1,000 ಪ್ರೋತ್ಸಾಹ ಧನ ನೀಡಲಾಗುವುದು. ತುಂತುರು ನೀರಾವರಿ ಪರಿಕರಗಳು ಬೇಕಾದ ರೈತರು ಅರ್ಜಿ ಸಲ್ಲಿಸಿದರೆ ಅದನ್ನು ನೀಡಲಾಗುವುದು. ಜೈವಿಕಗೊಬ್ಬರ ಹಾಗೂ ಔಷಧಿ ಸಂಗ್ರಹಿಸ ಲಾಗಿದೆ.ಮಳೆ ವಿಳಂಬದ ಕಾರಣದಿಂದ ನಾಟಿ ಕಾರ್ಯ 15 ದಿನಗಳ ಕಾಲ ತಡವಾಗಿ ಆರಂಭವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಓಂಕಾರಪ್ಪ ಸಭೆಗೆ ಮಾಹಿತಿ ನೀಡಿದರು.

ಸುವರ್ಣ ಭೂಮಿ ಯೋಜನೆ ಸಹಾಯಧನಕ್ಕಾಗಿ 590 ಅರ್ಜಿ ಬಂದಿವೆ. ಕಾಳು ಮೆಣಸಿನ ಗಿಡಗಳನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 75 ಸಾವಿರ ಕಾಳು ಮೆಣಸಿನ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ತಿಳಿಸಿದರು.

ಸೌತಿಕೆರೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗವಾಡಿ ಕಟ್ಟಡ ಸೋರುತ್ತಿರುವ ಬಗ್ಗೆ ಸದಸ್ಯ ಜೆ.ಜಿ. ನಾಗರಾಜ್ ಸಭೆಯ ಗಮನಕ್ಕೆ ತಂದರು. ಇದನ್ನು ದುರಸ್ತಿ ಪಡಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ವತಿಯಿಂದ ನೀಡಲಾಗಿರುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳದಿರುವ ನಿವೇಶನವನ್ನು ಹಿಂದಕ್ಕೆ ಪಡೆದು ಅಂಗನವಾಡಿ ಕಟ್ಟಡ ನಿರ್ಮಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿಯ ಹೊಸ ಕಾಮಗಾರಿಗಳಿಗೆ ರೂ. 2.41ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜಿ.ಪಂ. ಎಂಜಿನಿಯರ್ ಸಭೆಗೆ ತಿಳಿಸಿದರು.ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಸರಿಯಾದ ಮೂಲ ಸೌಕರ್ಯವಿಲ್ಲದೆ ಮಕ್ಕಳು ಸ್ನಾನ ಮಾಡದಂತೆ ಇರುತ್ತಾರೆ. ಮೊದಲು ಈ ಸಮಸ್ಯೆ ಬಗೆಹ ರಿಸಿ ಎಂದು ಜೆ.ಜಿ. ನಾಗರಾಜ್ ಅಧಿಕಾರಿಗೆ ಸೂಚಿಸಿದರು.

ಈ ಬಾರಿ ತಾಲ್ಲೂಕಿನಲ್ಲಿ 759 ಸೈಕಲ್ ವಿತರಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು.     ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಬಿ. ಉಮಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ ಕಾರ್ಯನಿರ್ವಾಹಣಾಧಿಕಾರಿ ವಿಜಯಕುಮಾರ್, ವ್ಯವಸ್ಥಾಪಕಿ ಮೀನಾಕ್ಷಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.