ADVERTISEMENT

ಬರ ದೂರ ಮಾಡಲು ಮೊರೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 12:00 IST
Last Updated 20 ಜುಲೈ 2012, 12:00 IST

ತರೀಕೆರೆ: ತಾಲ್ಲೂಕಿನ ಜನತೆ ಮತ್ತು ರೈತರನ್ನು ಕಾಡುತ್ತಿರುವ ಬರವನ್ನು ದೂರ ಮಾಡಿ ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಸುಭೀಕ್ಷೆ ನೆಲೆಸುವಂತೆ ಮಾಡುವ ಉದ್ದೇಶದಿಂದ ವರುಣದೇವನ ಕೃಪೆಗಾಗಿ ಪರ್ಜನ್ಯ ಹೋಮ ಮತ್ತು ಸಾಮೂಹಿಕ ಪರ್ಜನ್ಯ ಜಪ  ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಹೇಳಿದರು.

ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ಧವಾದ ಸೊಂಪುರದ ಪ್ರಸನ್ನ ಸೋಮೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಮಳೆ, ಬೆಳೆ ಮತ್ತು ಕ್ಷೇತ್ರದಲ್ಲಿ ಸುಭೀಕ್ಷೆ ನೆಲೆಸಲು ಏರ್ಪಡಿಸಿದ್ದ ಪರ್ಜನ್ಯ ಹೋಮ ಮತ್ತು ಸಾಮೂಹಿಕ ಪರ್ಜನ್ಯ ಜಪ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಜಿ ಸಂಸದೆ ತಾರಾದೇವಿ ಮಾತನಾಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ಕೂಲಿ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಕೃತಿಯ ಮೇಲಿನ ಅತಿಯಾದ ದೌರ್ಜನ್ಯವೆಸಗಿದ್ದಕ್ಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ನಮ್ಮನ್ನು ರಕ್ಷಿಸುವಂತೆ ಭಗವಂತನಲ್ಲಿ ಬೇಡಿ ಕೊಳ್ಳಬೇಕಿರುವುದು ಅನಿವಾರ್ಯ ಎಂದರು.

ಪರ್ಜನ್ಯ ಹೋಮ ಮತ್ತು ಸಾಮೂಹಿಕ ಪರ್ಜನ್ಯ ಜಪವನ್ನು ನೆರವೇರಿಸಿ ಮಾತನಾಡಿದ ಮತ್ತೂರಿನ ಕೇಶವ ಅವಧಾನಿ, ದೇವರಲ್ಲಿ ಹಠ ಹಿಡಿದು ನಮ್ಮನ್ನು ಮತ್ತು ನಮ್ಮ ಪರಿಸರವನ್ನು ರಕ್ಷಿಸಬೇಕೆಂದು  ಬೇಡಿ ಕೊಳ್ಳಲಾಗಿದೆ ಎಂದರು.

 ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಧೀರಾನಂದ ಮಹರಾಜ್ ಸಮ್ಮುಖದಲ್ಲಿ ಮಾಜಿ ಸಂಸದೆ ತಾರಾದೇವಿ, ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ಎಸ್.ಎಂ.ನಾಗರಾಜ್, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕ ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಅನ್ಬು, ವಿರೂಪಾಕ್ಷಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಚ್. ಶ್ರೀನಿವಾಸ್, ತಾಲ್ಲೂಕು ಕಿಸಾನ್ ಮಜ್ದೂರ್ ಕೇತ್ ಘಟಕದ ಅಧ್ಯಕ್ಷ ಟಿ.ಆರ್.ಬಸವರಾಜ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಿತ್ತಲಮನೆ ಮಲ್ಲಿಕಾರ್ಜುನ ಸೇರಿದಂತೆ ಹಲವಾರು ನಾಯಕರು ಮತ್ತು ಸಾರ್ವಜನಿಕರು ಭದ್ರಾನದಿಯಲ್ಲಿ ನಿಂತು ಸಾಮೂಹಿಕ ಪರ್ಜನ್ಯ ಜಪ ಪಠಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ, ಕಾರ್ಯದರ್ಶಿ ಕೆ.ಮಹ್ಮದ್ ಮುಂತಾ ದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.