ADVERTISEMENT

ಬಿಜೆಪಿ ನಾಯಕರ ದ್ವಂದ್ವ ನಿಲುವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:40 IST
Last Updated 12 ಫೆಬ್ರುವರಿ 2011, 8:40 IST

ಕಡೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಕೋಳಿ ಅಂಗಡಿಗಳ ವಿಷಯದಲ್ಲಿ ಬಿಜೆಪಿ ಶಾಸಕ ಡಾ.ವೈ.ಸಿ.ವಿಶ್ವನಾಥ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರ ಮಧ್ಯೆ ಆರಂಭವಾದ ಕೋಳಿಜಗಳ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಬೆಳ್ಳಿಪ್ರಕಾಶ್ ಮನವಿ ಸಲ್ಲಿಸುವುದರ ಮೂಲಕ ತಾರಕಕ್ಕೇರಿದೆ.  

ಕಳೆದೆರೆಡು ವರ್ಷಗಳಿಂದ ಹಳೇ ಸಂತೆಮೈದಾನದಲ್ಲಿ ನಿರ್ಮಿಸಿದ್ದ ಮಳಿಗೆಗಳಿಗೆ ಪಟ್ಟಣದಲ್ಲಿದ್ದ ಎಲ್ಲಾ ಕೋಳಿ ಅಂಗಡಿಗಳನ್ನು ಪುರಸಭೆ ವರ್ಗಾಯಿಸಲಾಗಿತ್ತು. ಕೆಲವು ಅಂಗಡಿಗಳ ಮಾಲೀಕರು ಪಟ್ಟಣದಿಂದ ದೂರವಿರುವ ಮಳಿಗೆಗಳಿಗೆ ಗ್ರಾಹಕರು ಬಾರದೇ ವ್ಯಾಪಾರ ಕುಸಿಯುತ್ತಿದ್ದು ಮಳಿಗೆಗಳ ಬಾಡಿಗೆ ಕಟ್ಟಲು ಆಗದೇ ಪುನಃ ಪಟ್ಟಣದಲ್ಲಿ ಕೋಳಿ ಅಂಗಡಿ ತೆರೆದಿದ್ದರು.
ಶಾಸಕ ಡಾ.ವೈ.ಸಿ.ವಿಶ್ವನಾಥ್ ಇತ್ತೀಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ತೀರ್ಮಾನದಂತೆ ಪಟ್ಟಣದಲ್ಲಿದ್ದ ಕೋಳಿ ಅಂಗಡಿಗಳನ್ನು ಹಳೇ ಸಂತೆಮೈದಾನಕ್ಕೆ ಸ್ಥಳಾಂತರಿಸಲು ಅನುಮೋದಿಸಿ ಮುಖ್ಯಾಧಿಕಾರಿಗಳಿಗೆ ಆದೇಶಿಸಿದ್ದರು.

ಪಟ್ಟಣದೊಳಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಿರುವುದಕ್ಕೆ ಕೆಲವು ರಾಜಕೀಯ ವ್ಯಕ್ತಿಗಳು ನಡೆಸುತ್ತಿರುವ ಕುತಂತ್ರ ಕಾರಣ ಎಂದು ಸಚಿವರಿಗೆ ವಿವರಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಕೋಳಿ ಅಂಗಡಿಗಳನ್ನು ತೆರೆಯಲು ನೀಡಿರುವ ಆದೇಶದ ಪ್ರತಿ, ನ್ಯಾಯಾಲಯವು ನೀಡಿರುವ ಪ್ರತಿಯನ್ನು ಹಾಗೂ ಕೋಳಿ ಅಂಗಡಿಗಳ ಮಾಲೀಕರ ಸಂಕಷ್ಟಗಳನ್ನು ವಿವರವಾಗಿ ವಿವರಿಸಿ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರಾದ ಎಸ್.ಸುರೇಶ್ ಕುಮಾರ್‌ಅವರಿಗೆ ಮನವಿ ಪತ್ರ ನೀಡಿದರು. 

ಒಂದು ವಾರದಲ್ಲಿ  ಪಟ್ಟಣದ ಅನೇಕ ವೃತ್ತಗಳಲ್ಲಿ  ದಿಢೀರ್ ಕೋಳಿ ಅಂಗಡಿಗಳು ಹುಟ್ಟಿಕೊಂಡಿವೆ. ಇದಕ್ಕೆ ಪುರಸಭೆಯ ಕೆಲವು ಸದಸ್ಯರ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಕೋಳಿ ಅಂಗಡಿಯ ಮಾಲೀಕರಲ್ಲಿ ಎರಡು ಗುಂಪುಗಳಾಗಿ ಒಂದೊಂದು ಗುಂಪಿನ ಮಾಲೀಕರು ಒಂದೊಂದು ಪಕ್ಷದ ಮುಖಂಡರನ್ನು ಒಲೈಸಿಕೊಳ್ಳುತ್ತಿದ್ದು ಅಂತಿಮವಾಗಿ ಕೋಳಿ ಜಗಳ ಎತ್ತ ಸಾಗುತ್ತದೆ ಎಂದು ಕಾದು ನೋಡಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.