ADVERTISEMENT

ಬೆಟ್ಟಿಂಗ್‌, ಗೋಕಳ್ಳರ ಮಾಫಿಯಾಕ್ಕೆ ನಡುಕ!

ಚಿಕ್ಕಮಗಳೂರು: ನೂತನ ಎಸ್‌ಪಿಯಾಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2016, 4:47 IST
Last Updated 5 ಆಗಸ್ಟ್ 2016, 4:47 IST
ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆ.ಅಣ್ಣಾಮಲೈ ಅಧಿಕಾರ ವಹಿಸಿಕೊಂಡರು.  ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್‌ ಬಾಬು ಪೊಲೀಸ್‌ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆ.ಅಣ್ಣಾಮಲೈ ಅಧಿಕಾರ ವಹಿಸಿಕೊಂಡರು. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್‌ ಬಾಬು ಪೊಲೀಸ್‌ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.   

ಚಿಕ್ಕಮಗಳೂರು: ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾ ಮಲೈ ಗುರುವಾರ ಅಧಿಕಾರ ಸ್ವೀಕರಿಸಿ ದ್ದಾರೆ. ಜಿಲ್ಲೆಯ ಸಜ್ಜನರ ನಿರೀಕ್ಷೆಗಳು ಗರಿ ಗೆದರಿವೆ. ನಾಯಿಕೊಡೆಯಂತೆ ತಲೆ ಎತ್ತಿರುವ ಇಸ್ಟೀಟ್‌ ಕ್ಲಬ್‌ಗಳು, ಸದ್ದಿಲ್ಲದೆ ನಡೆಯುತ್ತಿರುವ ಕ್ರಿಕೆಟ್‌ ಬೆಟ್ಟಿಂಗ್‌, ಮಟ್ಕಾ, ಹೈಟೆಕ್‌ ವೇಶ್ಯಾ ವಾಟಿಕೆ, ಡ್ರಗ್ಸ್‌ ಮಾಫಿಯಾಕ್ಕೆ ‘ಅಣ್ಣಾ’ ಅವರಿಂದಲಾದರೂ ಕಡಿವಾಣ ಬೀಳ ಬಹುದಾ? ಎಂದು ಜಿಲ್ಲೆಯ ಹಿತ ಬಯಸುವವರು ಎದುರು ನೋಡುತ್ತಿದ್ದಾರೆ.

ಬೆಟ್ಟಿಂಗ್‌ ಮಾಫಿಯಾ, ಮೀಟರ್‌ ಬಡ್ಡಿ ಹಾಗೂ ಹಫ್ತಾ ವಸೂಲಿಕೋರರ ಮಾಫಿಯಾ ವ್ಯವಸ್ಥಿತವಾಗಿ ಹೂಡಿದ್ದ ಚಕ್ರವ್ಯೂಹದೊಳಗೆ ಸಿಲುಕಿ ಸಜ್ಜನ ಅಧಿಕಾರಿ ಡಿವೈಎಸ್‌ಪಿ ಕಲ್ಲಪ್ಪ ಹಂಡಿ ಬಾಗ ಜೀವತೆತ್ತ ಘಟನೆ ನಡೆಯುತ್ತಿದ್ದಂತೆ ‘ಸುಸಂಸ್ಕೃತರ ಹಣೆಪಟ್ಟಿ’ ಹೊತ್ತಿರುವ ಕಾಫಿ ನಾಡು ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ತಾಲ್ಲೂಕಿನ ಚಿಕ್ಕೊಳಲೆ ಗ್ರಾಮದಲ್ಲಿ ಕಳೆದ ಜೂನ್‌ 26ರಂದು ನಡೆದಿದ್ದ ಜೂಜು ಅಡ್ಡೆ ಮೇಲಿನ ದಾಳಿ ಪ್ರಕರಣವನ್ನು ಪೊಲೀಸರು ನಿರ್ವಹಿ ಸಿರುವ ಬಗೆ, ಜೂಜು ಅಡ್ಡೆ ಮೇಲೆ ಪೊಲೀಸ್‌ ದಾಳಿ ನಡೆಯುವಂತೆ ಮಾಡಿ, ಜೂಜುಕೋರನೊಬ್ಬನನ್ನು ಬಾಕಿ ಹಣ ವಸೂಲಿಗಾಗಿ ಅಪಹರಿಸಲು ಸಂಚು ಮಾಡಿರುವುದನ್ನು ಅರಿತು ಕೊಳ್ಳಲು ಪೊಲೀಸ್‌ ಅಧಿಕಾರಿಗಳು ಎಡವಿರು ವುದು ಇಲಾಖೆಯೊಳಗೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಿಐಡಿ ತನಿಖೆ ಯಲ್ಲೂ ಬೊಟ್ಟು ಮಾಡಿದೆ. ‘ವಿಷಮ ಸ್ಥಿತಿ’ಯಲ್ಲಿ ಅಧಿಕಾರ ವಹಿಸಿ ಕೊಂಡಿರುವ ಅಣ್ಣಾಮಲೈ ಅವರಿಗೆ  ಇಲಾಖೆ ಒಳಗೂ ಮತ್ತು ಹೊರಗೂ ‘ರಿಪೇರಿ’ ಮಾಡುವ ದೊಡ್ಡ ಸವಾಲು  ಇದೆ ಎನ್ನುವ ಮಾತು ಪೊಲೀಸ್‌ ಇಲಾಖೆ ಒಳಗಿನಿಂದಲೇ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಅಧಿಕೃತವಾಗಿ 86 ಕ್ಲಬ್‌ಗಳಿವೆ. ಇಷ್ಟೇ ಅಲ್ಲದೆ ಅನಧಿಕೃತ ವಾಗಿಯೂ ಹಲವು ಕ್ಲಬ್‌ಗಳು ನಡೆ ಯುತ್ತಿವೆ. ಇದರಲ್ಲಿ 60ಕ್ಕೂ ಹೆಚ್ಚು ಕ್ಲಬ್‌ಗಳನ್ನು ಮುಚ್ಚಿಸುವ ಅಗತ್ಯವಿದೆ ಎಂದು ಈ ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಅವರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ.

ನಗರದ ಕೂಗಳತೆ ದೂರದಲ್ಲಿರುವ ಹಿರೇಮಗಳೂರು ಸಮೀಪ ಹೊಸದಾಗಿ ಆರಂಭವಾಗಿರುವ ಕ್ಲಬ್‌ವೊಂದರಲ್ಲಿ ಲಕ್ಷ ಲಕ್ಷ ಹಣ ಪಣವಿಟ್ಟು ಇಸ್ಟೀಟ್‌ ಆಟ ಆಡಿಸುತ್ತಿರುವುದು ರಾಜಾರೋಷವಾಗಿ ನಡೆಯುತ್ತಿದೆ. ಈ ಕ್ಲಬ್‌ನಲ್ಲಿ ಜಾಕ್‌ ಪಾಟ್‌ ಹೆಸರಿನಲ್ಲಿ ‘ಸ್ಟ್ರೈಕ್‌’ ಆಟ ಆಡುವ ಜೂಜುಕೋರರು ಒಂದು ಆಟದಲ್ಲಿ ಒಮ್ಮೆ ‘ಬುಕ್‌’ ಆದರೆ ₹80 ಸಾವಿರ ಕಳೆದುಕೊಳ್ಳುತ್ತಾರೆ.

ಒಂದೇ ಆಟದಲ್ಲಿ ಮೂರು ಬಾರಿ ಬುಕ್‌ ಆಗಿ ಎರಡೂವರೆ ಲಕ್ಷದವರೆಗೂ ಹಣ ಕಳೆದುಕೊಂಡು, ಮನೆ, ಆಸ್ತಿ ಮಾರಿದವರು ನಗರದಲ್ಲಿ ಇದ್ದಾರೆ. ಕ್ಲಬ್‌ ನಡೆಸುವವರು ಹೊರ ಗಿನಿಂದ ಬೌನ್ಸರ್‌ಗಳನ್ನು ಕರೆಸಿಕೊಂಡು ಇಸ್ಪೀಟ್‌ ಆಟ ಆಯೋಜಿಸುತ್ತಾರೆ. ತಾಲ್ಲೂಕಿನ ತೋರಣ ಮಾವಿನಲ್ಲೂ ಇದೇ ರೀತಿ ಕ್ಲಬ್‌ವೊಂದರಲ್ಲಿ ಕೆಲ ತಿಂಗಳ ಹಿಂದಷ್ಟೆ ಮೋಜು, ಮೇಜು ವಾನಿ ಸಮೇತ ಕೋಟ್ಯಂತರ ರೂಪಾಯಿ ವಹಿವಾಟಿನ ‘ಇಸ್ಟೀಟ್‌ ಟೂರ್ನಿ’ ಆಯೋ ಜಿಸಿದ್ದರು ಎನ್ನುತ್ತಾರೆ ಸ್ಥಳೀಯ            ನಿವಾಸಿಗಳು.

ಜಿಲ್ಲೆಯಲ್ಲಿರುವ ಅಧಿಕೃತ ರೆಸಾರ್ಟ್‌, ಹೋಂಸ್ಟೇಗಳ ಎರಡುಪಟ್ಟು ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ತಲೆ ಎತ್ತಿವೆ. ‘ಸಜ್ಜನರ ಊರು’, ಸುಂದರ ಪ್ರವಾಸಿ ತಾಣಗಳ ಬೀಡು, ನಿಸರ್ಗ ದೇವತೆಯೇ ಧರೆಗೆ ಕೊಡುಗೆ ನೀಡಿರು ವಂತಿರುವ ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಮಲೆನಾಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಆದರೆ, ಹೊರಗಿ ನಿಂದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಬರುವವರು ನಡೆಸುತ್ತಿರುವ ಅನೈತಿಕ ಚಟುವಟಿಕೆಗಳಿಂದಾಗಿ ‘ಸೆಕ್ಸ್‌ ಟೂರಿಸಂ ಸ್ಪಾಟ್‌’ ಕಳಂಕವನ್ನು ಜಿಲ್ಲೆ ಹೊತ್ತು ಕೊಳ್ಳುತ್ತಿದೆ ಎಂದು ಕೆಲ ಹೋಂಸ್ಟೇ ಮಾಲೀಕರೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಮಾದಕ ಪದಾರ್ಥಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಕರಿಗೆ, ಉದ್ಯಮಿಗಳಿಗೆ ಪೂರೈಸುವ ಜಾಲವೂ ನಗರದಲ್ಲಿ ಸಕ್ರಿಯವಾಗಿದೆ. ಮಾದಕ ಪದಾರ್ಥಗಳ ಸೇವನೆಗೆ ದಾಸ ರಾಗಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ ಗಳು ಜೀವ ಕಳೆದುಕೊಂಡಿರುವ ನಿದರ್ಶ ನಗಳಿವೆ. ಕಳೆದ ಕೆಲ ದಿನಗಳಿಂದ ಸರಣಿ ಮನೆಗಳ್ಳತನ, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಣಿ ಸರಗಳ್ಳತನ ಮಾಡುತ್ತಿರುವ ಪ್ರಕರಣ ಗಳು ಹೆಚ್ಚುತ್ತಿವೆ. ಆತಂಕಕ್ಕೆ ಒಳಗಾ ಗಿರುವ ಜನರಿಗೆ ಸುರಕ್ಷತಾ ಭಾವ ತಂದುಕೊಡುವ ಸವಾಲು ಅಣ್ಣಾಮಲೈ ಅವರ ಮುಂದಿದೆ.

ಇನ್ನೂ ಜಿಲ್ಲೆಯಲ್ಲಿ ಗೋಕಳ್ಳಸಾಗಣೆ, ಅಕ್ರಮ ಕಸಾಯಿಖಾನೆಗಳು, ಮರಳು ಅಕ್ರಮ ಸಾಗಣೆ ಯಾವುದೇ ನಿಯಂತ್ರಣ ವಿಲ್ಲದೆ ನಡೆಯುತ್ತಿದೆ. ಇವುಗಳನ್ನು ಮುನ್ನಡೆಸುವ ಮಾಫಿಯಾಗಳಿಗೂ ‘ಅಣ್ಣಾಮಲೈ ಬರುತ್ತಾರೆ’ ಎನ್ನುವುದು ಖಾತ್ರಿಯಾಗುತ್ತಲೇ ನಡುಕ ಉಂಟಾ ಗಿದೆ. ಇಲಾಖೆಯೊಳಗಿನ ಭ್ರಷ್ಟರಿಗೆ, ಸೋಮಾರಿಗಳಿಗೂ ತಳಮಳ ಉಂಟಾ ಗಿದೆ ಎನ್ನುವ ಮಾತು ಪೊಲೀಸ್‌ ಇಲಾಖೆಯೊಳಗಿನಿಂದಲೂ ಕೇಳಿ ಬರುತ್ತಿದೆ.

ಒಂದೆಡೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಿದ್ದಾರೆ. ತಪ್ಪು ಕಾಣಿಸುತ್ತಿರುವ ಕಡೆಗೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್‌ ದಾಳಿ ಮಾಡಿ ಕೆಲವರ ಜಂಘಾಬಲ ನಡುಗಿಸುತ್ತಿದ್ದಾರೆ. ಮೇಜಿ ನಿಂದ ಮೇಜಿಗೆ ತೆವಳುತ್ತಿದ್ದ ಕಡತಗಳು ಈಗ ಕೊಠಡಿಯಿಂದ ಕೊಠಡಿಗೆ ಜಿಗಿಯುತ್ತಿವೆ ಎನ್ನುವ ಮಾತು ಸಾರ್ವಜ ನಿಕರ ವಲಯದಲ್ಲಿದೆ. ಶಿಸ್ತು, ಕಾನೂನು ಪಾಲನೆ, ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ಇಲಾಖೆ ‘ಸದಾ ಎಚ್ಚರದ ಸ್ಥಿತಿ’ಯಲ್ಲಿಟ್ಟರೆ, ಜನಸ್ನೇಹಿಗೊಳಿಸಿದರೆ ಕರಾವಳಿ ಜನರಷ್ಟೇ ಅಲ್ಲ, ಮಲೆನಾಡಿನ ಜನರ ಹೃದಯದಲ್ಲೂ ‘ಅಣ್ಣಾ’ಗೆ ಸ್ಥಾನ ಖಚಿತ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಅಣ್ಣಾ ಮಲೈ ಪರಿಚಯ
ಚಿಕ್ಕಮಗಳೂರು: 2011ರ ಬ್ಯಾಚಿನ ಐಪಿಎಸ್‌ ಅಧಿಕಾರಿ ಯಾದ ಅಣ್ಣಾಮಲೈ ಮೂಲತಃ ತಮಿಳು ನಾಡಿನ ವರು. ಎಂಬಿಎ ಪದವೀಧರರು. ಉಡುಪಿ ಜಿಲ್ಲೆಯಲ್ಲಿ ಎಎಸ್‌ಪಿ, ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎನ್ನುವ ಹೆಸರು ಸಂಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.