ನರಸಿಂಹರಾಜಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪಶ್ಚಿಮ ಘಟ್ಟ ಮತ್ತು ಹುಲಿ ಯೋಜನೆ ಜಾರಿಗೆ ತಂದಿರುವುದರಿಂದ ಬಡ ದಲಿತ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ತಲ ತಲಾಂತರದಿಂದ ಕಾಡಿನಲ್ಲಿ ವಾಸ ಮಾಡುತ್ತ ಇಲ್ಲಿನ ನೈಸರ್ಗಿಕ ಪರಿಸರ ವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದಲಿತರಿಗೆ ಶೇಕಡ 18ರ ಮೀಸಲಾತಿ ಯಲ್ಲಿ ಭೂಮಿಯನ್ನು ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಲೆನಾಡಿನ ಭಾಗದಲ್ಲಿ ಹುಲಿ ಯೋಜನೆಯ ಹೆಸರು ಹೇಳಿಕೊಂಡು ಭೂ ಮಾಲಿಕರನ್ನು, ಕಾಫಿ, ರಬ್ಬರ್,ಟೀ,ಬೆಳೆಗಾರರನ್ನು ಒಕ್ಕಲೆಬ್ಬಿಸಲು ಸರ್ಕಾರ ಹೊರಟಿದೆ.ಈ ರೀತಿ ಭೂಮಿಯನ್ನು ಬಿಡಿಸಲು ಮುಂದಾದರೆ ಸಮಿತಿಯು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸರ್ಕಾರ 75ವರ್ಷಗಳ ಹಿಂದಿನ ದಾಖಲಾತಿಯನ್ನು ಬಡವರಿಗೆ, ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಅರಣ್ಯ ಇಲಾಖೆಯವರು ಕೇಳುತ್ತಿರುವುದನ್ನು ರದ್ದುಗೊಳಿ ಸಬೇಕು ಹಾಗೂ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾಯಿದೆಯಲ್ಲಿ ಹಕ್ಕು ಪತ್ರ ಕೊಟ್ಟಂತೆ ಆಯಾಯ ಭೂ ರಹಿತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಹಕ್ಕುಪತ್ರ ಕೊಡಬೇಕು, ಅರಣ್ಯ ಕಾಯಿದೆಯಡಿ ಸಾಮಾನ್ಯ, ಬಡವ, ಹಿಂದುಳಿದ ವರ್ಗದವರನ್ನು ಒಕ್ಕಲೆಬ್ಬಿಸಿ ರಕ್ಷಣೆಕೊಡಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಘಟ್ಟ ಮತ್ತು ಹುಲಿ ಯೋಜನೆಯಂತಹ ಬಡವರನ್ನು ಒಕ್ಕಲೆಬ್ಬಿಸಬಾರದು, ಇತರರು ಭೂಮಿ ಯನ್ನು ಒತ್ತುವರಿ ಮಾಡಿ ಕೊಂಡಿರುವ ಬಗ್ಗೆ ಸಮಗ್ರ ತನಿಖೆಯಾ ಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್. ಎಂ.ಶಿವಣ್ಣ, ಕೆ.ಕೆ.ಬಾಬು, ಎಚ್.ಕೆ.ನಾಗಪ್ಪ, ಪೂರ್ಣಿಮಾ, ಜಿ.ನಾರಾಯಣ, ಎಂ.ಬಿ.ದೇವಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.