ADVERTISEMENT

ಭದ್ರಾ ಎಸ್ಟೇಟ್‌ನಿಂದ ಜಲಮೂಲಕ್ಕೆ ಧಕ್ಕೆ: ವಿರೋಧ

ಸರಳು ನೀರನ್ನೇ ನಂಬಿದ ಕೃಷಿಕರಿಗೆ ಎದುರಾದ ಆತಂಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 5:27 IST
Last Updated 21 ಡಿಸೆಂಬರ್ 2013, 5:27 IST

ಕೊಪ್ಪ: ತಾಲ್ಲೂಕಿನ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಎಸ್ಟೇಟ್ 4ನೇ ಬ್ಲಾಕ್‌ನ ಕಣಿವೆ ಪ್ರದೇಶದಲ್ಲಿ ಹರಿದು ಬರುವ ಸರಳು ನೀರನ್ನು ಸಂಗ್ರಹಿಸಿಡಲು ಎಸ್ಟೇಟ್‌ನವರು ಬೃಹತ್ ಪ್ರಮಾಣದ ಒಡ್ಡು ನಿರ್ಮಿಸಲು ಮುಂದಾಗಿದ್ದು, ಇದರಿಂದಾಗಿ ಎಸ್ಟೇಟ್‌ ಕೆಳಭಾಗದ 20ಕ್ಕೂ ಹೆಚ್ಚು ಕೃಷಿಕರ ಕುಡಿಯುವ ನೀರು, ಕೃಷಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಬೇಸಿಗೆಯಲ್ಲಿ ಕಾಫಿ ಗಿಡಗಳಿಗೆ ನೀರೊ ದಗಿಸುವ ಉದ್ದೇಶದಿಂದ ಎಸ್ಟೇಟ್‌ ಮಧ್ಯೆ ಸರ್ವೆ ನಂ. 94ರ ಕಣಿವೆ ಪ್ರದೇಶದಲ್ಲಿ ಹರಿದು ಬರುವ ಸರಳು ನೀರು ಸಂಗ್ರಹಿಸುವ ಉದ್ದೇಶದಿಂದ ಎಸ್ಟೇಟ್‌ನವರು ಜೆಸಿಬಿ ಮೂಲಕ ಭೂಮಿ ಬಗೆದು ಭಾರೀ ಗಾತ್ರದ ಒಡ್ಡು ನಿರ್ಮಿಸಲು ಮುಂದಾಗಿದ್ದಾರೆ ಇದನ್ನು ಪ್ರಶ್ನಿಸಲು ಹೋದಾಗ ವ್ಯವಸ್ಥಾಪಕ ಅಚ್ಚಯ್ಯ ‘ನಮ್ಮ ಎಸ್ಟೇಟ್‌ ಒಳಗೆ ಕಾಮ ಗಾರಿ ನಡೆಸಲು ಯಾರಿಂ ದಲೂ ಅನು ಮತಿಬೇಕಿಲ್ಲ’ ಎಂಬ ಉಡಾಫೆ ಉತ್ತರ ನೀಡಿದರು ಎಂದು  ದೂರಿದ್ದಾರೆ.

ಗುಡ್ಡದ ಮೇಲಿಂದ ಹರಿದು ಬರುವ ಸರಳು ನೀರನ್ನೇ ಅವಲಂಬಿಸಿ ನೂರಾರು ವರ್ಷಗಳಿಂದ ಕೃಷಿ ಜೀವನ ಸಾಗಿಸು ತ್ತಿರುವ ಗೋಳಿಮಕ್ಕಿ ಬಾಲಚಂದ್ರ, ವಿಜಯ ರಾಘವ, ಬಶೀರ್ ಅಹಮದ್, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಜಿ.ಎಸ್. ನಟರಾಜ್, ಶ್ರೀರಂಗ, ವಸಂತಲಕ್ಷ್ಮಿ, ಸದಾಶಿವರಾವ್ ಮುಂತಾದ 20ಕ್ಕೂ ಹೆಚ್ಚು ಕೃಷಿಕರ ಬದುಕು, ಸರಳು ನೀರು ಸ್ಥಗಿತಗೊಂಡರೆ ಅತಂತ್ರವಾಗಲಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಣ್ಣಿನ ಒಡ್ಡು ಕೊಚ್ಚಿ ಹೋದರೂ ಕೆಳಭಾಗದ ಬಾಲಚಂದ್ರ, ವಿಜಯ ರಾಘವ, ಬಶೀರ್ ಅಹಮದ್ ಅವರ ಮನೆ ಮತ್ತು ತೋಟ ಗದ್ದೆಗಳಿಗೆ ಅಪಾಯ ಎದುರಾಗಲಿದೆ.

ಆದ್ದರಿಂದ ಕೂಡಲೇ ಒಡ್ಡು ನಿರ್ಮಾಣ ಕೈಬಿಡುವಂತೆ ಮನವಿ ಮಾಡಿದರೂ ಎಸ್ಟೇಟ್ ವ್ಯವಸ್ಥಾಪಕರು ಸ್ಪಂದಿಸದಿದ್ದಾಗ ಸಂತ್ರಸ್ತ ರೈತರೆಲ್ಲ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ನಾರಾಯಣ್, ಗ್ರಾಮ ಸ್ಥರಾದ ಶ್ರೀರಂಗ, ಎಂ.ವಿ. ಕೃಷ್ಣಮೂರ್ತಿ, ಬಿ.ಆರ್.ವೆಂಕಟೇಶ್, ಮುಂತಾದ ವರೊಂದಿಗೆ  ಜಯಪುರ ನಾಡಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಶೇಷಗಿರಿ ಅವರಿಗೆ ದೂರು ನೀಡಿದ್ದು,  ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಗುರುವಾರ ಜಯಪುರ ಪೊಲೀಸ್ ಸಿಬ್ಬಂದಿ ಸಹಿತ ಎಸ್ಟೇಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಉಪತಹಶೀಲ್ದಾರ್ ಸೂಚನೆ ಮೇರೆಗೆ ಕಾಮಗಾರಿ ಸ್ಥಗಿತ ಗೊಂಡಿದ್ದು, ಮತ್ತೆ ಮುಂದುವರಿಸಿದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.