ADVERTISEMENT

ಭ್ರಷ್ಟ ಸರ್ಕಾರಕ್ಕೆ ಜನರಿಂದ ತಕ್ಕ ಉತ್ತರ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 9:35 IST
Last Updated 5 ಮಾರ್ಚ್ 2012, 9:35 IST

ಸಖರಾಯಪಟ್ಟಣ (ಚಿಕ್ಕಮಗಳೂರು):ರಾಜ್ಯದ ಬಿಜೆಪಿ ಸರ್ಕಾರ ಜನರ ಸ್ವಾಸ್ಥ ಕೆಡಿಸುವಂತಹ ಬ್ಲೂ ಫೀಲಂ, ರೇವ್ ಪಾರ್ಟಿ, ಲೈಂಗಿಕ ಹಗರಣಗಳನ್ನು ಹುಟ್ಟುಹಾಕಿರುವುದು ಒಂದೆಡೆಯಾದರೆ, ಮಿತಿ ಮೀರಿದ ಭ್ರಷ್ಟಾಚಾರದಿಂದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರು ಜೈಲುಪಾಲಾಗಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಟೀಕಿಸಿದರು.

ಸಖರಾಯಪಟ್ಟಣದ ಹೋಬಳಿ ದೇವನೂರು, ಸಖರಾಯಪಟ್ಟಣ, ನಿಡಘಟ್ಟ, ಕಳಾಸಪುರ, ಸಿಂದಿಗೆರೆ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ನಾವು ಶಾಸಕರಾಗಿದ್ದಾಗ ವಿಧಾನಸಭೆಯನ್ನು ದೇಗುಲವೆಂದು ಭಾವಿಸಿದ್ದೆವು. ಇಂದು ಅದನ್ನು ಬಿಜೆಪಿ ಅನಾಚಾರದ ಕೇಂದ್ರವನ್ನಾಗಿ ಮಾಡಿದೆ ಎಂದು ಕಿಡಿಕಾರಿದ ಅವರು, ಕೇಂದ್ರ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಜನತೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದು, ಅದರಲ್ಲಿ ಪ್ರಮುಖವಾಗಿ ರೈತರ ಬಡ್ಡಿ ಮನ್ನಾ, ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆಗಳು, ಕಾಫಿ ಬೆಳೆಗಾರರ ಯೋಜನೆ ಸೇರಿದಂತೆ ಇನ್ನೂ ಹತ್ತು ಹಲವು ಕಾರ್ಯಕ್ರಮ ಮಾದರಿಯಾಗಿವೆ ಎಂದರು.

ನಿಡಘಟ್ಟದಲ್ಲಿ ಬಿಜೆಪಿ,ಜೆಡಿಸ್ ತೊರೆದು ಲೋಕೇಶ್, ರಾಜು, ಹಂಬಣ್ಣ, ರಾಮ, ಮಧು ಕಾಂಗ್ರೆಸ್ ಸೇರಿದರು. ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ, ಪಕ್ಷದ ಜಿಲ್ಲಾ ವಕ್ತಾರ ಎ.ಎನ್.ಮಹೇಶ್, ಜಿ.ಪಂ. ಮಾಜಿ ಅಧ್ಯಕ್ಷ ಕೇಂಪರಾಜು, ಕೆ.ಎಸ್.ಶಾಂತೇಗೌಡ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ, ಚಂದ್ರಶೇಖರ್, ಎನ್.ಡಿ.ಚಂದ್ರಪ್ಪ, ಜಿ.ಪಂ. ಮಾಜಿ ಸದಸ್ಯೆ ಹೇಮಾವತಿ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.