ADVERTISEMENT

ಮಾನವೀಯ ಮೌಲ್ಯ ಭಾರತದಲ್ಲಿ ಮಾತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:55 IST
Last Updated 19 ಜುಲೈ 2012, 9:55 IST

ಕಡೂರು: ಬೇರೆಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ರಾಷ್ಟ್ರೀಯ ಮನೋಭಾವನೆ, ಮಾನವೀಯತೆಯ ಮೌಲ್ಯಗಳನ್ನು ಕಾಣಲು ಸಾಧ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ತಿಳಿಸಿದರು.

ಕಡೂರು ರೋಟರಿ ಸಂಸ್ಥೆ ಮಂಗಳವಾರ ಶಂಕರ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯರಲ್ಲಿ ನಿಜವಾದ ಸಂಸ್ಕೃತಿ, ಸಂಸ್ಕಾರಗಳು ಬೆರೆತು ಹೋಗಿದ್ದು, ಇತರೆ ರಾಷ್ಟ್ರಗಳು ಭಾರತೀಯರ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಮಾನವೀಯತೆ, ಸರ್ವಧರ್ಮಗಳ ಸಾರವನ್ನು ಕಾಣಲು ಇಲ್ಲಿ ಮಾತ್ರ ಕಾಣಲು ಸಾಧ್ಯ. ಎಲ್ಲ ಧರ್ಮದವರು ಒಗ್ಗಟ್ಟಾಗಿ ದುಡಿದು ಬದುಕುತ್ತಿರುವುದು ಇತರೆ ರಾಷ್ಟ್ರಗಳಿಗೆ ನಮ್ಮ ರಾಷ್ಟ್ರ ಮಾದರಿಯಾಗಿದೆ ಎಂದರು.

ರೋಟರಿ ಸಂಸ್ಥೆ ಅಂತರ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿ ಕೃಷಿಗೆ ಸಂಬಂಧಿಸಿದಂತೆ ಚಿಂತನೆ ನಡೆಸಬೇಕಾಗಿದೆ. ರೈತರೊಂದಿಗೆ ಬೆರೆತು ಗೋಷ್ಠಿಗಳನ್ನು ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕೆಂದು ರೋಟರಿ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಶಿವಮೊಗ್ಗದ ರೋಟರಿ ಗವರ್ನರ್ ಎಚ್.ಎಲ್. ರವಿ 2011-12 ನೇ ಸಾಲಿನಲ್ಲಿ ಕಡೂರು ರೋಟರಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿ ಪಡೆದಿರುವುದನ್ನು ಸಂಸ್ಥೆಯ ಎ್ಲ್ಲಲ ಪದಾಧಿಕಾರಿಗಳನ್ನು ಶ್ಲಾಘಿಸಿದರು.
ನಿಕಟಪೂರ್ವ ಅಧ್ಯಕ್ಷ ಜನರಲ್ ತಿಮ್ಮಯ್ಯನವರು ನೂತನ ಅಧ್ಯಕ್ಷ ಕೆ.ಎಚ್.ಎ. ಪ್ರಸನ್ನ ಅವರಿಗೆ ಪದವಿಯನ್ನು ನೀಡಿದರು.

ಪದವಿ ಸ್ವೀಕರಿಸಿ ಮಾತನಾಡಿದ ಪ್ರಸನ್ನ, ಅನೇಕ ಹೊಸ ಹೊಸ ಕಲ್ಪನೆಗಳು ಇವೆ. ಹೇಳುವುದಕ್ಕಿಂತ ಮಾಡಿ ತೋರಿಸುವುದು ಉತ್ತಮ. ಒಂದು ವರ್ಷದ ಅವಧಿಯಲ್ಲಿ ಸಂಸ್ಥೆ ಮತ್ತು ಸಾರ್ವಜನಿಕರು ಒಪ್ಪುವಂತಹ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಶಾಸಕ ಡಾ.ವೈ.ಸಿ. ವಿಶ್ವನಾಥ್,  ಗಿರೀಶ್, ವಕೀಲ ಶಿವಕುಮಾರ್,  ಸೂರಿ ಶ್ರೀನಿವಾಸ್, ಜಿ. ರಂಗರಾವ್, ಶಿವಾನಂದಯ್ಯ, ಹರೀಶ್, ಅಮರ್‌ನಾಥ್, ವಿನುತಾ ಬಾಬು, ಗೀತಾ ಶ್ರೀನಾಥ್, ಮೀನಾ ಪ್ರಸನ್ನ, ಲಕ್ಷ್ಮೀಶ ಪಿ. ಶಿರಹಟ್ಟಿ, ಶ್ರೀನಿವಾಸಮೂರ್ತಿ, ಎಸ್. ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.