ADVERTISEMENT

`ಮುಂದಿನ ಪೀಳಿಗೆಗೆ ಪರಿಸರ ಉಳಿಯಲಿ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:28 IST
Last Updated 17 ಡಿಸೆಂಬರ್ 2012, 9:28 IST

ತರೀಕೆರೆ: ಮನುಕುಲದ ರಕ್ಷಣೆಗೆ ಪರಿಸರದ ಸಂರಕ್ಷಣೆ ಅತಿ ಅಗತ್ಯವಾಗಿದ್ದು, ಕೇವಲ ಹಣದಿಂದ ಮಾತ್ರ ಉನ್ನತಿ ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ 12-12-12 ರ ಸವಿನೆನಪಿಗಾಗಿ ಗಂಧ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಂಧ ಸಸಿಯನ್ನು ನೆಟ್ಟು ಮಾತನಾಡಿದರು.

ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಕೃಷಿ ಭೂಮಿ, ಸಸ್ಯ ಸಂಪತ್ತು ಮತ್ತು ಉತ್ತಮ ಪರಿಸರವನ್ನು ಮೀಸಲಿಡಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಒಂದು ಸಾವಿರ ವರ್ಷಕ್ಕೊಮ್ಮೆ ಸಂಧಿಸುವ ಮ್ಯೋಜಿಕ್ ಸಂಖ್ಯೆಯಾದ 12-12-12 ರ ನೆನಪಿಗಾಗಿ ಸಂಘಟನೆಗಳು ಉತ್ತಮ ಕಾರ್ಯಕ್ರಮ ಆಯೋಜಿಸಿವೆ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್ ಮಾತನಾಡಿ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ 12 ಶ್ರೀಗಂಧದ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು, ಸೈಕಲ್ ಬಳಸಿ ಇಂಧನ ಉಳಿಸಿ ಮತ್ತು ಶ್ರೀಗಂಧ ಬೆಳಸಿ ಸಂಪತ್ತು ಗಳಿಸಿ ಎಂಬ ಘೋಷಣೆಯೊಂದಿಗೆ ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಸಿದರು.

ಶ್ರೀಗಂಧ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎನ್.ವಿಶುಕುಮಾರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಜಗದೀಶ್, ವಿಷ್ಣುಸೇನೆ ಅಧ್ಯಕ್ಷ ಲೋಹಿತ್, ಕಿರಣ್, ಕಿರಣ್‌ಗೌಡ, ಉಪ ಪ್ರಾಚಾರ್ಯ ಜಯಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.