ADVERTISEMENT

ಮುರಿದ ಗೇಟ್: ರೋಗಿ ನಡೆಯಲೇಬೇಕು!

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 9:19 IST
Last Updated 22 ಜುಲೈ 2013, 9:19 IST

ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಎರಡೂ ಗೇಟುಗಳು ಮುರಿದು ಹೋಗಿದ್ದು, ಗೇಟ್ ಬಳಿಯಿಂದ 100 ಅಡಿ ದೂರದಲ್ಲಿರುವ ಆಸ್ಪತ್ರೆಯ ಕಟ್ಟಡ್ಕೆ ರೋಗಿಗಳು ನಡೆದೇ ಸಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಎಂಜಿಎಂ ಆಸ್ಪತ್ರೆಯ ಹಳೆ ಕಟ್ಟಡ ನಿರ್ಮಾಣದ ವೇಳೆ ಕೇವಲ ಬಲಭಾಗದಲ್ಲಿ ಒಂದು ಗೇಟನ್ನು ಮಾತ್ರ ನಿರ್ಮಿಸಲಾಗಿತ್ತು. ಈ ಗೇಟುಗಳಲ್ಲಿ ಪ್ರಾಣಿಗಳು ಬಾರದಂತೆ ಪೈಪನ್ನು ಬಳಕೆ ಮಾಡಿ ಆಗಿದ್ದು, ಸುಮಾರು ಇಪ್ಪತ್ತು ವರ್ಷಕ್ಕೂ ಹಳೆಯದಾಗಿದೆ.

ಗೇಟಿಗೆ ಬಳಸಲಾಗಿರುವ ಕಬ್ಬಿಣದ ಪೈಪುಗಳು ಜೀವ ಕಳೆದುಕೊಂಡಿದ್ದು, ಅನೇಕ ಕಡೆಗಳಲ್ಲಿ ತುಂಡಾಗಿ ಹೋಗಿವೆ. ಇದರಿಂದಾಗಿ ರಸ್ತೆಯಿಂದ ಆಸ್ಪತ್ರೆಯ ಕಟ್ಟಡಕ್ಕೆ ಸಾಗಬೇಕಾದ ಆಟೊ, ದ್ವಿಚಕ್ರ ಚಕ್ರವಾಹನಗಳು ಗೇಟಿನ ಸಂದುಗಳಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಆಟೊ, ಕಾರ್, ದ್ವಿಚಕ್ರವಾಹನಗಳಲ್ಲಿ ಬರುವ ರೋಗಿಗಳು, ರಸ್ತೆಯಲ್ಲಿಯೇ ಇಳಿದು, ಸರ್ಕಸ್ ಮಾಡುವ ಮೂಲಕ ಆಸ್ಪತ್ರೆಯ ಆವರಣವನ್ನು ಸೇರಬೇಕಾದ ಸ್ಥಿತಿ ಒದಗಿದೆ.

ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಕಬ್ಬಿಣದ ಗೇಟ್ ಸಹ ಗುಂಡಿ ಬಿದ್ದಿದ್ದು, ರಸ್ತೆಯಿಂದ ಕಡಿದಾದ ಏರುಮುಖವನ್ನು ಹೊಂದಿರುವುದರಿಂದ ಈ ಗೇಟಿನ ಮೂಲಕವೂ ವಾಹನ ಸಾಗಲಾಗದೇ, ಆಸ್ಪತ್ರೆಗೆ ಬರುವ ರೋಗಿಗಳು ನಡೆದು ಸಾಗಬೇಕಾಗಿದೆ.

ಅನೇಕ ರೋಗಿಗಳನ್ನು ಗೇಟ್ ಬಳಿಯಿಂದ ವ್ಹೀಲ್‌ಚೇರ್ ಮೂಲಕ ಕರೆತರಲಾಗುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿ ತುರ್ತು ಕಾರ್ಯದಲ್ಲಿ ತೊಡಗಿದ್ದರೆ ನಡದೇ ಬರಬೇಕಾಗಿದೆ. ಅಲ್ಲದೇ ರಾತ್ರಿಯ ವೇಳೆ ಗೇಟ್ ಬಳಿ ಬೆಳಕಿನ ವ್ಯವಸ್ಥೆಯಿಲ್ಲದಿರುವುದರಿಂದ ಅನೇಕ ರೋಗಿಗಳು ಮತ್ತು ರೋಗಿಗಳ ಸಂಬಂಧಿಗಳು ಗೇಟಿನಲ್ಲಿ ಮುರಿದುಹೋಗಿರುವ ಕಂಬಿಗಳ ನಡುವೆ ಕಾಲು ಹಾಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿವೆ.

ಗೇಟ್ ದುರಸ್ತಿಗೆ ಬಂದು ವರ್ಷ ಕಳೆದಿದ್ದರೂ, ದುರಸ್ತಿಗೆ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣವೇ ಎರಡೂ ಗೇಟ್‌ಗಳನ್ನು ದುರಸ್ತಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.