ADVERTISEMENT

ಮೊಸಳೆ ಬಾಯಿಗೆ ಸಿಕ್ಕ ಆರು ಕುರಿ ಸಾವು!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 9:00 IST
Last Updated 16 ಮಾರ್ಚ್ 2011, 9:00 IST

ಬಾಳೆಹೊನ್ನೂರು: ಇಲ್ಲಿನ ಭದ್ರಾನದಿ ಸೇತುವೆ ಸಮೀಪ ದಡದಲ್ಲಿ ನೀರು ಕುಡಿಯಲು ತೆರಳಿದ್ದ ಆರು ಕುರಿಗಳು ಮೊಸಳೆಗಳಿಗೆ ಆಹಾರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಡಿಮಠದ ಮುರುಗನ್ ಹಾಗೂ ಮುತ್ತುಕರ್ಪನ್ ಎಂಬವರು 32 ಕುರಿಗಳು ಮೇವು ತಿಂದು ನೀರು ಕುಡಿಯಲು ಚಿಕ್ಕಮಗಳೂರು- ಬಾಳೆಹೊನ್ನೂರು ಸಂಪರ್ಕ ಕಲ್ಪಿಸುವ ಭದ್ರಾನದಿ ಸೇತುವೆ ಸಮೀಪ ಶನಿವಾರ ತೆರಳಿದ್ದಾಗ ದಿಢೀರ್ ಪ್ರತ್ಯಕ್ಷವಾದ ಮೂರು ಬೃಹತ್ ಮೊಸಳೆಗಳು ಆರು ಕುರಿಗಳನ್ನು ಸೆಳೆದು ನುಂಗಲು ಯತ್ನಿಸಿವೆ.
 
ಮುರುಗನ್ ಮೊಸಳೆಗಳನ್ನು ಕೋಲಿನಿಂದ ಬಡಿದು ಕುರಿಗಳನ್ನು ರಕ್ಷಿಸಲು ಮಾಡಿದ ಯತ್ನ ವಿಫಲವಾಗಿದೆ. ಅಷ್ಟರಲ್ಲಾಗಲೇ ಮೂರು ಕುರಿಗಳು ಅಸುನೀಗಿದ್ದವು. ಉಳಿದ ಮೂರು ಕುರಿಗಳನ್ನು ಮೊಸಳೆ ಬಾಯಿಯಿಂದ ರಕ್ಷಿಸಲಾಯಿತಾದರೂ, ಅವೂ ಕೆಲ ಕ್ಷಣಗಳಲ್ಲಿಯೇ ಕೊನೆಯುಸಿರೆಳೆದವು.ಆರು ಕುರಿ ಮೊಸಳೆ ಬಾಯಿಗೆ ಸಿಲುಕಿದ್ದರಿಂದ ರೂ. 24 ಸಾವಿರ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾ ಖೆಯ ಅಧಿಕಾರಿಗಳನ್ನು ಮುರುಗನ್ ಮತ್ತು ಮುತ್ತುಕರ್ಪನ್ ಕೋರಿದ್ದಾರೆ.

ಕೋಳಿ ತ್ಯಾಜ್ಯ ಕಾರಣ?:ಭಾರೀ ಗಾತ್ರದ ಮೊಸಳೆಗಳು ಕಾಣಿಸಿಕೊಂಡಿರುವುದು ನಾಗರಿ ಕರಲ್ಲಿ ಆತಂಕ ಮೂಡಿಸಿದೆ. ಪಟ್ಟಣದಲ್ಲಿನ ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರಿ ವೇಳೆ ಭದ್ರಾನದಿಗೆ ಎಸೆಯುತ್ತಿರುವುದು ಮೊಸಳೆಗಳು ಇರಲು ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಮೊಸಳೆಗಳು ನರಭಕ್ಷಕ ಆಗುವ ಸಾಧ್ಯತೆ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.