ಕೊಪ್ಪ: ಏಷ್ಯಾಖಂಡದಲ್ಲೇ ಅತಿ ಎತ್ತರದ ಹುತ್ತವಿರುವ ತಾಲ್ಲೂಕಿನ ಹಾಲ್ಮುತ್ತೂರು ಲೋಕಪರಮೇಶ್ವರಿ ಅಮ್ಮ ನವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಆರು ಶತಮಾನಗಳ ಹಿಂದೆ ಜೈನ ಆಡಳಿತದಲ್ಲಿ ಉದ್ಬವಗೊಂಡ 18.5 ಅಡಿ ಎತ್ತರದ ಮಣ್ಣಿನ ಹುತ್ತಕ್ಕೆ ದೇವಾಲಯ ನಿರ್ಮಿಸಿ ಲೋಕಪರಮೇಶ್ವರಿ ದೇವರ ಆರಾಧನೆ ಮಾಡಲಾಗುತ್ತಿದೆ. ವಿಜಯನಗರ ಅರಸ ಬುಕ್ಕರಾಯ ಹಳೇಬೀಡಿನ ಅರ್ಚಕ ಕುಟುಂಬವೊಂದಕ್ಕೆ ದೇವರ ಪೂಜೆಗೆ ಅವಕಾಶ ನೀಡಿದ್ದು ಈ ಕ್ಷೇತ್ರದ ಐತಿಹ್ಯ.
ಮುನಿಯೂರು, ಹಾಲ್ಮೂತ್ತೂರು, ಕುಸ್ಲೂರು, ಚಿಕ್ಳೂರು, ಮಳಲೂರು, ಹೊಳಲೂರು ಹಾಗೂ ಶಿರೂರುಗಳಲ್ಲಿ ಸಪ್ತಮಾತೃಕೆಯ ದೇವರುಗಳೆಂದೇ ಲೋಕಪರಮೇಶ್ವರಿ ಖ್ಯಾತವಾಗಿದ್ದು, ರಥೋತ್ಸವದಲ್ಲಿ ಹಾಲ್ಮೂತ್ತೂರು, ಹೊಸೂರು, ಛಾವಲ್ಮನೆ, ಮಕ್ಕಿಕೊಪ್ಪ, ಹೊನಗಾರು, ದೇವರಹಳ್ಳಿ ಹಾಗೂ ಕೊಡ್ತಾಳು ಸೇರಿದಂತೆ ಹಲವು ಊರುಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಥೋತ್ಸವದ ಅಂಗವಾಗಿ ಶುಕ್ರವಾರ ಕುಂಕುಮೋತ್ಸೋವ, ಅವಭೃತ ಸ್ನಾನ, ರಾತ್ರಿ ಮಹೋತ್ಸವ, ರಂಗಪೂಜೆ, ಸಂಪ್ರೋಕ್ಷಣೆ, ಕಲಶಾಭಿಷೇಕ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಚ್.ವೈ.ಸೀತಾರಾಮಭಟ್ ತಿಳಿಸಿದರು.
ತಾ.ಪಂ.ಸದಸ್ಯೆ ರುಕ್ಮಿಣಿ, ಎ.ಪಿ.ಎಂ.ಸಿ. ಮಾಜಿ ನಿರ್ದೇಶಕ ಎಚ್.ಡಿ..ಶ್ರೀನಿವಾಸ್, ಭಂಡಿಗಡಿ ಗ್ರಾ.ಪಂ.ಸದಸ್ಯೆ ಎಚ್.ಕೆ.ಪ್ರಶಾಂತ್, ದೇವಸ್ಥಾನ ಸೇವಾ ಸಮಿತಿ ಸಂಚಾಲಕ ಕುಡಿನೆಲ್ಲಿ ಪ್ರಕಾಶ್, ಶಿವಸ್ವಾಮಿ ಹುಲುಕೋಡು, ಅನುರಾಧಾ ದಿನೇಶ್ ಇದರು. ಹುತ್ತಕ್ಕೆದೇವಿಯ ಅಲಂಕಾರ ಮಾಡಲಾಗಿತ್ತು.ಬೆಂಗಳೂರಿನ ಲೋಕಪರ ಮೇಶ್ವರಿ ಪ್ರಸಾದ ವಿನಿಯೋಗ ಸಂಘ ಅನ್ನ ಸಂತರ್ಪಣೆ ಏರ್ಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.