ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆ ಮತ್ತು ನೆಮ್ಮೋರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿ, ಕಿರೂರು, ಕಡಕಲ್, ಅಡಿಕೇಸು, ಉಡುತಾಳು, ಮುಂಡಗಾರು, ಹಿಮ್ಮಿಗೆ ರಸ್ತೆಗಳಲ್ಲಿ ಸಂಚರಿಸಿದರೆ ದುಃಸ್ಥಿತಿಯ ಅರಿವಾಗುತ್ತದೆ.
ಈ ಭಾಗದಲ್ಲಿ ರಸ್ತೆ, ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಹಲವು ವರ್ಷಗಳಿಂದ ಕಾಡುತ್ತಲೇ ಇದೆ. ತಾಲ್ಲೂಕು ಕೇಂದ್ರದ ಸಂಪರ್ಕದಿಂದ ದೂರವೇ ಉಳಿದಿರುವ ಈ ಭಾಗದ ಜನರು ಆಸ್ಪತ್ರೆ, ಶಿಕ್ಷಣ, ದಿನಸಿ ಸಾಮಾನುಗಳು ಹಾಗೂ ಇನ್ನಿತರೆ ದೈನಂದಿನ ಅಗತ್ಯಗಳಿಗೆ ಕನಿಷ್ಠ 5ರಿಂದ 10 ಕಿಲೊ ಮೀಟರ್ ನಡಿಗೆಯಲ್ಲಿ ಬಂದು ಆಗೊಮ್ಮೆ ಈಗೊಮ್ಮೆ ಸಂಚರಿಸುವ ಬಸ್ ಮೂಲಕ ದೂರದ ನೆಮ್ಮೋರಿಗೆ ಬರಬೇಕಾದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಈ ಹಿಂದೆ ನಕ್ಸಲ್ ಸಮಸ್ಯೆ ತೀವ್ರಗತಿಯಲ್ಲಿ ಇದ್ದಾಗ ಈ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ನಕ್ಸಲ್ ಪ್ರಭಾವವನ್ನು ತಗ್ಗಿಸಬೇಕೆಂದು ಅಭಿವೃದ್ಧಿ ಪ್ಯಾಕೇಜ್ಗಳು ಘೋಷಣೆಯಾದರೂ ಈ ವರೆಗೂ ಸಮರ್ಪಕ ರಸ್ತೆ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ.
ಈ ಪ್ರದೇಶದ ಅಭಿವೃದ್ಧಿಗೆ ಪ್ಯಾಕೇಜ್ ಬಿಡುಗಡೆಯಾದ ನಂತರ ಸ್ವತಂತ್ರ ಬಂದ ಅರು ದಶಕಗಳ ತರುವಾಯ ಮಣ್ಣಿನ ರಸ್ತೆಗಳು ನಿರ್ಮಾಣವಾದರೂ ಸಹ ನಕ್ಸಲ್ ಚಟುವಟಿಕೆ ಕುಂಠಿತಗೊಂಡ ಬೆನ್ನಲ್ಲೇ ಅಭಿವೃದ್ಧಿ ವೇಗವೂ ಕುಂಠಿತಗೊಂಡಿದೆ.
ಇದು ನಕ್ಸಲ್ ಪ್ಯಾಕೇಜ್ ಅಲ್ಲ, ಅಭಿವೃದ್ಧಿ ಪ್ಯಾಕೇಜ್ ಎಂದು ಸರ್ಕಾರ ಆ ಸಂದರ್ಭದಲ್ಲಿ ಹೇಳಿಕೊಂಡಿದ್ದರೂ ನಕ್ಸಲ್ ಚಟುವಟಿಕೆ ತಗ್ಗಿದ ನಂತರ ವಿಶೇಷ ಅನುದಾನವೂ ಸ್ಥಗಿತಗೊಂಡಿರುವುದು ಯಾವ ಕಾರಣಕ್ಕಾಗಿ ಪ್ಯಾಕೇಜ್ ನೀಡಿದ್ದರು ಎಂದು ಪುನರ್ ವಿಮರ್ಶೆ ಮಾಡುವಂತಾಗಿದೆ.
ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಉಡುತಾಳು ಅರುಣ್ ಕುಮಾರ್, ನಮ್ಮ ಊರುಗಳಿಗೆ ಬಸ್ ಸೌಕರ್ಯ ಕನಸಿನ ಮಾತು. ಕನಿಷ್ಠ ದ್ವಿಚಕ್ರ ವಾಹನ ಸರಾಗವಾಗಿ ಚಲಿಸದಂತಹ, ಅನಾರೋಗ್ಯಕ್ಕೆ ಒಳಗಾದವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ.
ಸಾಲದೆಂಬಂತೆ ಪ್ರತಿ ವರ್ಷ ಈಗಿರುವ ಮಣ್ಣಿನ ರಸ್ತೆಯ ಮೇಲೆ ಪುನಃ ಮಣ್ಣನ್ನು ಸುರಿಯುತ್ತಾರೆ. ಇದು ಬೇಸಿಗೆಯಲ್ಲಿ ದೂಳಿನಿಂದ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಒಡ್ಡಿದರೆ, ಮಳೆಗಾಲದಲ್ಲಿ ವಾಹನಗಳು ಕೆಸರಿನಲ್ಲಿ ಹುಗಿದುಕೊಳ್ಳುವಂತೆ ಮಾಡುತ್ತದೆ~ ಎಂದು ಸಂಕಷ್ಟ ತೋಡಿಕೊಂಡರು.
ಇದೇ ಪ್ರದೇಶದ ಪುಟ್ಟಪ್ಪ ಹೇಳುವ ಪ್ರಕಾರ, ಬೇರೆ ಸಂದರ್ಭದಲ್ಲಿ ಜನಪ್ರತಿನಿಧಿಗಳಲ್ಲಿ ನಮ್ಮ ಗೋಳು ತೋಡಿಕೊಂಡರೆ ಪ್ರಯೋಜನವಿಲ್ಲ. ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಬರುವ ರಾಜಕೀಯ ಮುಖಂಡರಲ್ಲಿ ನಮ್ಮ ಬೇಡಿಕೆ ಇಡೋಣವೆಂದರೆ ಮತಯಾಚನೆಗೂ ನಮ್ಮ ಊರಿಗೆ ಕಾಲಿಡುವುದಿಲ್ಲ.
ರಸ್ತೆ ಡಾಂಬರೀಕರಣ ಮಾಡಿಕೊಡಿ ಎಂದರೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಡಾಂಬರೀಕರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಆದರೆ ಈ ರಸ್ತೆಯ ಬಹುಭಾಗ ಕಂದಾಯ ಇಲಾಖೆಗೆ ಒಳಪಟ್ಟಿದ್ದರೂ ರಸ್ತೆ ಸಂಪರ್ಕ ಕಲ್ಪಿಸಬೇಕೆಂಬ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವಿರಳವಾಗಿ ಮನೆಗಳಿರುವ ಈ ಭಾಗದಲ್ಲಿ ಜನಪ್ರತಿನಿಧಿಗಳು ವೋಟ್ಬ್ಯಾಂಕ್ ಲೆಕ್ಕಾಚಾರ ಹಾಕಿ ಅಭಿವೃದ್ಧಿ ಕಾರ್ಯ ಮಾಡದೆ, ಎಲ್ಲಾ ನಾಗರಿಕರಿಗೂ ಮೂಲ ಸೌಕರ್ಯ ಕಲ್ಪಸುವುದು ನಮ್ಮ ಕರ್ತವ್ಯ ಎಂದು ಕೆಲಸ ನಿರ್ವಹಿಸಿದಲ್ಲಿ ನಮ್ಮ ಸಂಕಷ್ಟ ಬಗೆಹರಿಯಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.