ADVERTISEMENT

ಸಮನ್ವಯ ಶಿಕ್ಷಣ ಮೂಲಕ ಅರಿವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 10:50 IST
Last Updated 2 ಫೆಬ್ರುವರಿ 2011, 10:50 IST

ನರಸಿಂಹರಾಜಪುರ: ಸರ್ವಶಿಕ್ಷಣ ಅಭಿಯಾನ ಹಾಗೂ ಸಮನ್ವಯ ಶಿಕ್ಷಣ ಕಾರ್ಯಕ್ರಮದ ಬಗ್ಗೆ  ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಬಗ್ಗೆ ಕಾರ್ಯಕ್ರಮ ಇಲ್ಲಿನ ಪೊಲೀಸ್ ಠಾಣೆ ಮುಂಭಾಗದಲ್ಲಿ ಇತ್ತೀಚೆಗೆ ನಡೆಯಿತು.ವಿಶೇಷ ಅಗತ್ಯವುಳ್ಳ ಬುದ್ಧಿಮಾಂದ್ಯ, ಅಂಗವಿಕಲ, ಶ್ರವಣದೋಷವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣದ ಮೂಲಕ ಸಿಗುವ ಸೌಲಭ್ಯಗಳ ಬಗ್ಗೆ ಶಿವಮೊಗ್ಗ ಪ್ರಥಮ ಜೀವಾನಾಧಾರ ಸಂಸ್ಥೆಯ ಕಲಾ ತಂಡ ‘ಓದಿಗೆ ಏತಕ್ಕೆ ಸೂತಕ’ ಎಂಬ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಯಿತು.

ಅಂಗವಿಕಲ ಮಕ್ಕಳ ಪೋಷಕರು ತಮ್ಮ ಮಕ್ಕಳ ಬಗ್ಗೆ ಯಾವುದೇ ಕೀಳು ಭಾವನೆ ಹೊಂದದೆ ಇತರ ಮಕ್ಕಳಂತೆ ಅವಕಾಶ ನೀಡಿದರೆ ಅವರು ಉತ್ತಮ ಸಾಧನೆ ಮಾಡಬಹುದು.ಇಂತವರಿಗೆ ಅನುಕಂಪ ತೋರಿಸುವುದರ ಬದಲು ಅವಕಾಶ ನೀಡ ಬೇಕು. 14 ವರ್ಷದೊಳಿಗ ಮಕ್ಕಳನ್ನು ಗ್ಯಾರೇಜ್, ಹೋಟೆಲ್, ಗಣಿ, ಕಟ್ಟಡ ನಿರ್ಮಾಣದಂತಹ ಕೆಲಸಗಳಿಗೆ ಕಳುಹಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹಾಗಾಗಿ ತಪ್ಪದೆ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳುಹಿಸ ಬೇಕು,

ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣ ಯಂತ್ರ,ಅಂಗವಿಕಲ ಮಕ್ಕಳಿಗೆ ಮೂರು ಗಾಲಿಯ ಸೈಕಲ್, ಶಾಲಾಗೆ ಹೋಗಲಾರದ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣದ ಮೂಲಕ ಶಿಕ್ಷಕರನ್ನು ನೇಮಿಸಿ ಮನೆಯಲ್ಲೆ ಶಿಕ್ಷಣ ನೀಡುವ ಸೌಲಭ್ಯ,ಮಾತು ಬಾರದ ಮಕ್ಕಳಿಗೆ ರೇಡಿಯೊ, ಸನ್ನೆ ಮೂಲಕ ಶಿಕ್ಷಣ, ಹಳ್ಳಿಯಿಂದ ಬರುವ ಮಕ್ಕಳಿಗೆ ಬಸ್‌ದರವನ್ನು ನೀಡುವ,ಮಧ್ಯಾಹ್ನದ ಬಿಸಿಯೂಟ ಸೌಲಭ್ಯದ ಬಗ್ಗೆ ನಾಟಕದ ಮೂಲಕ ಶಿವಮೊಗ್ಗದ ರಮೇಶ್‌ನಾಯ್ಕ ಮತ್ತು ತಂಡ ವಿವರಿಸಿತು.

ಶಾಲಾ ಮಕ್ಕಳು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೀದಿ ನಾಟಕವನ್ನು ವೀಕ್ಷಿಸಿದರು. ಕ್ಷೇತ್ರಶಿಕ್ಷಣಾ ಧಿಕಾರಿ ಎಚ್.ಮಂನುನಾಥ್, ಕ್ಷೇತ್ರಸಂನ್ಮೂಲ ಕೇಂದ್ರದ ಆನಂದ್‌ಕುಮಾರ್, ಬಿ.ಆರ್‌ಸಿ ಗಳಾದ ಶಿವರಾಜ್, ಚನ್ನಬಸಪ್ಪ ಹಾಗೂ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.