ADVERTISEMENT

ಸ್ವಸಹಾಯ ಸಂಘ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 10:00 IST
Last Updated 21 ಜನವರಿ 2011, 10:00 IST

ಚಿಕ್ಕಮಗಳೂರು: ಮಹಿಳಾ ಸ್ವಸಹಾಯ ಸಂಘಗಳಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಒತ್ತಾಯಿಸಿ ಸ್ವಸಹಾಯ ಸಂಘದ ಮಹಿಳೆಯರು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜೀವನಜ್ಯೋತಿ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಸ್ವಸಹಾಯ ಸಂಘದ ಮಹಿಳೆಯರು ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೇವಲ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಮಾತ್ರ ಸುತ್ತುನಿಧಿ, ಸಹಾಯಧನ ಸಾಲ ಇತರೆ ಸವಲತ್ತುಗಳ ಸಿಗುತ್ತಿವೆ. ಹಾಸನ  ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 825ಕ್ಕೂ ಹೆಚ್ಚು  ಸ್ವಸಹಾಯ ಸಂಘಗಳಿಗೂ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.

ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳಗೊಂಡಿದ್ದು, ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಯಲ್ಲಿ ಉಂಟಾಗುತ್ತಿರುವ ತಾರತಮ್ಯ ಬಗೆಹರಿಸಬೇಕು. ಗ್ರಾಮೀಣ ರಸ್ತೆ, ಬೀದಿದೀಪ ವಿದ್ಯುತ್ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು. ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸುವುದು, ಸರ್ಕಾರಿ ಸೌಲಭ್ಯದ ಮಾಹಿತಿಯನ್ನು ಎಲ್ಲಾ ಸ್ವಸಹಾಯ ಸಂಘಗಳಿಗೂ ನೀಡಬೇಕೆಂದು ಕೋರಿದ್ದಾರೆ.

ಜೀವನಜ್ಯೋತಿ ಮಹಿಳಾ ಒಕ್ಕೂಟದ ಮಮತಾ, ಪ್ರಮೀಳ,ರತ್ನ, ಜಯಕರ್ನಾಟಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಜೆನ್ನಿಕ್ಲಾಸ್ ಡೇವಿಡ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಕ್ಷಿಣಾಮೂರ್ತಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಶ್ರೀಕಾಂತ್, ಹೊಯ್ಸಳ ಸಂಘದ ಅಧ್ಯಕ್ಷ  ಸಿ.ಎಸ್. ದಿವಾಕರಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.