ADVERTISEMENT

ಸ್ವಾಭಿಮಾನಿ ಸಂಕಲ್ಪ ಯಾತ್ರೆ 31 ರಿಂದ: ರಕ್ಷಿತಾ ಪ್ರೇಮ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:25 IST
Last Updated 19 ಜುಲೈ 2012, 10:25 IST

ಚಿಕ್ಕಮಗಳೂರು: ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಶಾಸಕ ಶ್ರೀರಾಮುಲು ಇದೇ 29ರಿಂದ ಆಗಸ್ಟ್ 5ವರೆಗೆ ಕೈಗೊಂಡಿರುವ ಸ್ವಾಭಿಮಾನಿ ಸಂಕಲ್ಪಯಾತ್ರೆ ಜುಲೈ 31ರಂದು ಸಂಜೆ 5ಗಂಟೆಗೆ ಚಿಕ್ಕಮಗಳೂರಿಗೆ ಆಗಮಿಸಲಿದೆ ಎಂದು ಪಕ್ಷದ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನಟಿ ರಕ್ಷಿತಾ ಪ್ರೇಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ಮೂಲಕ ಜಿಲ್ಲೆ ಪ್ರವೇಶಿಸುವ ಯಾತ್ರೆಯು ಅಂದು ರಾತ್ರಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿ ಮರು ದಿನ ಉಡುಪಿ ಜಿಲ್ಲೆ ಪ್ರವೇಶಿಸಲಿದೆ. ನಂತರ ರಾಮನಗರದಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ಪಕ್ಷ ಉದಯಕ್ಕೂ ಮೊದಲೇ ಜಿಲ್ಲೆಯಲ್ಲಿ ಶ್ರೀರಾಮುಲು ಅಭಿಮಾನಿಗಳ ಬಳಕ ಅಸ್ತಿತ್ವಕ್ಕೆ ಬಂದಿದೆ. ಸುಮಾರು 980 ಸದಸ್ಯರನ್ನು ಹೊಂದಿದ್ದು, ಈ ಸಮಾವೇಶಕ್ಕೆ ಬೆಂಬಲ ನೀಡುವವರು. ಪಕ್ಷ ಬಲಪಡಿಸಲು ಮತ್ತು ಜನರ ಸಮಸ್ಯೆ ಅರಿಯಲು ಈ ಯಾತ್ರೆ ಸಹಕಾರಿಯಾಗಲಿದೆ ಎಂದರು.

ಮಲೆನಾಡು ಮತ್ತು ಬಯಲು ಪ್ರದೇಶಗಳನ್ನು ಒಳಗೊಂಡ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಸಂಕಲ್ಪಯಾತ್ರೆ ಅಂಗವಾಗಿ ಬೈಕ್ ರ‌್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮಳೆ ಆರಂಭವಾದರೆ ರ‌್ಯಾಲಿಗೆ ತೊಡಕಾಗುವ ಸಂಭವಿರುವುದರಿಂದ ರ‌್ಯಾಲಿ ಕೈಬಿಡಲು ನಿರ್ಧರಿಸಲಾಗಿದೆ. ನಗರ ಮತ್ತು ಪಟ್ಟಣ ಪ್ರವೇಶಿಸಿದಾಕ್ಷಣ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಸಮಾನತೆ, ಸಮಬಾಳು ಮತ್ತು ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಹಾಗೂ ಬರಪೀಡಿತ ಪ್ರದೇಶದ ಜನರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಈಗಾಗಲೇ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು. ಈಗ ಆಯಾ ಜಿಲ್ಲೆಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಸಂಕಲ್ಪಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡ ಪ್ರವೀಣ್‌ಕುಮಾರ್ ಮಾತನಾಡಿ, ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳು ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.