ADVERTISEMENT

ಸ್ವಾವಲಂಬನೆ ಮೂಡಿಸುವ ಶಿಕ್ಷಣ ಅವಶ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:45 IST
Last Updated 4 ಅಕ್ಟೋಬರ್ 2012, 5:45 IST

ಅಜ್ಜಂಪುರ:  ವಿದ್ಯಾರ್ಥಿಗಳಲ್ಲಿ  ಸ್ವಂತಿಕೆ ಬೆಳೆಸಿ, ಸ್ವಾಭಿಮಾನ ಮೂಡಿಸಿ, ಸ್ವಾವಲಂಬನೆಗೆ ದಾರಿ ಮಾಡಿಕೊಡುವ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿ ಹಬ್ಬ ಮಹೋತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪಠ್ಯದಲ್ಲಿ ದೋಷವಿದೆ. ವಿದೇಶಿಯರನ್ನು ವೈಭವಿಕರಿಸುವ ಮೂಲಕ  ನಮ್ಮ ಪೂರ್ವಜರು ಹಲವು  ಕ್ಷೇತ್ರಗಳಲ್ಲಿ ಮಾಡಿರುವ ಅದ್ವಿತೀಯ ಸಾಧನೆಯನ್ನು ಮರೆಮಾಚಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಜೀವನದಲ್ಲಿಯೇ ಸ್ವಂತಿಕೆ ನಾಶವಾಗಿ, ಪರರನ್ನು ಅವಲಂಬಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಸರಾಗವಾಗಿ ಆಂಗ್ಲಭಾಷಾ ಅರಿವು ಮೂಡಿಸಲು 100 ಅವಧಿ ಬೋಧಿಸುವ ಆಂಗ್ಲ, ಯೋಗ, ರಾಷ್ಟ್ರಭಕ್ತಿ ಮೂಡಿಸುವ -ವಿಕಸನ, ಪದವಿ ನಂತರ ವ್ಯಾಸಂಗ ಮಾಡಬಹುದಾದ ಕೋರ್ಸ್, ಅಥವ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ನಿರ್ದೇಶಿಸುವ -ಸಹವಿಯೋಗ ಎಂಬ ಮೂರು ವಿಷಯಗಳನ್ನು ಮೂರು ವರ್ಷಗಳಲ್ಲಿ ಬೋಧಿಸುವ -ಹೊಸಹೆಜ್ಜೆ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ರಜತ ಭವನ ಹಾಗೂ ವಿಜ್ಞಾನ ವಿಭಾಗ  ದೊರಕಿಸಿಕೊಡಲು ಪ್ರಯತ್ನಿಸ ಲಾಗುವುದು ಎಂದರು.

ತಾ.ಪಂ. ಸದಸ್ಯ ರಾಜ್‌ಕುಮಾರ್ ಸ್ನಾತಕೋತ್ತರ ಘಟಕ ಸ್ಥಾಪಿಸಲು ಒತ್ತಾಯಿಸಿದರು. ಎ.ಸಿ. ಚಂದ್ರಪ್ಪ, ಮಾತನಾಡಿ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಕಾಲೇಜು ಮಂಜೂರು ಮಾಡಿಸಿದರು ಎಂದು ನೆನಪಿಸಿದರು.

ಜಿ.ಪಂ. ಉಪಾಧ್ಯಕ್ಷ ಎಸ್.ಬಿ. ಆನಂದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಜಿ.ಪಂ.ಸದಸ್ಯ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷ ಬಿ.ಆರ್.ರವಿ, ತಾ.ಪಂ. ಸದಸ್ಯ ಗಂಗಮ್ಮ ಸಿದ್ದಾರೂಢ, ಶಕುಂತಲ, ಜಿ.ಧರ್ಮೇಂದ್ರ, ಗ್ರಾ.ಪಂ. ಅಧ್ಯಕ್ಷೆ ಅನ್ನ ಪೂರ್ಣಮ್ಮ, ಉಪಾಧ್ಯಕ್ಷ ಶಂಕರಾನಂದ ಸ್ವಾಮಿ, ಸಿಡಿಸಿ ಕಾರ್ಯಧ್ಯಕ್ಷ ಉಪೇಂದ್ರಕುಮಾರ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಜೆ.ಅವಿನಾಶ್, ಪ್ರಾಂಶುಪಾಲ ಸಿ.ರಾಮಚಂದ್ರಪ್ಪ, ಉಪನ್ಯಾಸಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.