ADVERTISEMENT

ಹಿಂಗಾರು ತೃಪ್ತಿಕರ:ರಾಗಿ ಬೆಳೆಗೆ ವರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 6:27 IST
Last Updated 11 ಅಕ್ಟೋಬರ್ 2017, 6:27 IST
ಕಡೂರು ತಾಲ್ಲೂಕಿನಲ್ಲಿ ನಳನಳಿಸುತ್ತಿರುವ ರಾಗಿ ಬೆಳೆ.
ಕಡೂರು ತಾಲ್ಲೂಕಿನಲ್ಲಿ ನಳನಳಿಸುತ್ತಿರುವ ರಾಗಿ ಬೆಳೆ.   

ಕಡೂರು: ಮುಂಗಾರು ವಿಫಲವಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದ ತಾಲ್ಲೂಕಿನ ರೈತರು ಹಿಂಗಾರು ಮಳೆ ತೃಪ್ತಿಕರವಾಗಿ ಸುರಿದಿದ್ದರಿಂದ ಕೊಂಚ ನಿರಾಳವಾಗಿದ್ದಾನೆ. ಮುಖ್ಯವಾಗಿ ಮಳೆಯಾಶ್ರಿತ ನೆಲದಲ್ಲಿ ಬಿತ್ತಿದ್ದ ರಾಗಿ ಬೆಳೆ ಕೈ ಹಿಡಿಯುತ್ತದೆ ಎನ್ನುವ ಆಶಾಭಾವದಲ್ಲಿ ರೈತರು ಇದ್ದಾರೆ.

ಸತತ 4 ವರ್ಷಗಳಿಂದ ತಾಲ್ಲೂಕಿನಲ್ಲಿ ಬರಗಾಲ ತನ್ನ ಪ್ರತಾಪ ತೋರಿಸಿತ್ತು. ಈ ವರ್ಷವೂ ಅದು ಮುಂದುವರೆಯುವ ಲಕ್ಷಣವಾಗಿ ಮುಂಗಾರು ಸಂಪೂರ್ಣ ವಿಫಲವಾಗಿತ್ತು. ಇದರಿಂದ ಪ್ರಮುಖ ಬೆಳೆಗಳ ಬಿತ್ತನೆಯಾಗಲಿಲ್ಲ.

ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ಈರುಳ್ಳಿ ತೀರಾ ಕಡಿಮೆ ಪ್ರದೇಶದಲ್ಲಿ ಹಾಕಲಾಗಿತ್ತು. ಉಳಿದಂತೆ ಹೊಲಗಳು ಹಾಳು ಬಿದ್ದಿದ್ದವು. ಮೇವಿಲ್ಲದೆ ಸಮೃದ್ಧವಾಗಿ ಹಾಲು ಕೊಡುತ್ತಿದ್ದ ಹಸುಗಳನ್ನು ಅತ್ಯಂತ ಕಡಿಮೆ ಬೆಲೆಗೆ ರೈತರು ಮಾರಾಟ ಮಾಡಿದ್ದರು.

ADVERTISEMENT

ಆದರೆ 20 ದಿನಗಳಿನಿಂದ ಹಿಂಗಾರು ಮಳೆ ಕಡೂರು ತಾಲ್ಲೂಕಿನಾದ್ಯಂತ ತೃಪ್ತಿಕರವಾಗಿ ಸುರಿದಿದೆ. ಮಳೆ ಕೊರತೆಯಿಂದ ಖಾಲಿ ಇದ್ದ ಹೊಲಗಳಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಇದೀಗ ಮಳೆ ಬಂದಿದ್ದರಿಂದ ಒಣಗುವ ಹಾದಿ ಹಿಡಿದಿದ್ದ ರಾಗಿ ಬೆಳೆ ನಳನಳಿಸುತ್ತಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ ಒಂದೆರಡು ಬಾರಿ ಅತ್ಯಲ್ಪ ಮಳೆ ಬಂದರೂ ರಾಗಿ ಬೆಳೆ ಕೈಗೆ ಸಿಗಬಹುದು ಎಂಬ ನಿರೀಕ್ಷೆ ರೈತರದ್ದು.

ಮೇವಿನ ಬೆಲೆ ಗಗನ ಮುಖಿಯಾಗಿತ್ತು. ಒಂದು ಹೊರೆ ಹುಲ್ಲಿಗೆ ₹500 ಇತ್ತು. ಮೇವನ್ನು ಒದಗಿಸಲಾಗದ ರೈತರು ಜಾನುವಾರುಗಳನ್ನು ಮಾರಿದ್ದರು. ಈಗ ರಾಗಿ ಬೆಳೆ ಚೆನ್ನಾಗಿ ಬರುವ ಖಚಿತ ನಿರೀಕ್ಷೆಯಿಂದ ರೈತರು ಹಸು ಕೊಳ್ಳಲು ಹೋದರೆ 35 ಸಾವಿರಕ್ಕೂ ಹೆಚ್ಚಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಆದರೂ ಈ ಬಾರಿ ಮೇವಿನ ಕೊರತೆ ಹೆಚ್ಚು ಕಾಡುವುದಿಲ್ಲ ಎಂಬ ಸಮಾಧಾನ ರೈತರದ್ದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.