ಮೂಡಿಗೆರೆ: ತಾಲ್ಲೂಕಿನ ಬಾನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಉಣ್ಣಕ್ಕಿ ಜಾತ್ರೆಯಲ್ಲಿ ಹುತ್ತ ಅಲುಗಾಡುವುದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಕ್ಕಳ ಹುಣ್ಣಿಮೆ ಅಂಗವಾಗಿ ನಡೆಯುವ ಹುಣ್ಣಕ್ಕಿ ಜಾತ್ರೆಯನ್ನು ವೀಕ್ಷಿಸಲು ಈ ಬಾರಿ ಮೂರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮುಂಜಾನೆಯಿಂದಲೇ ಉಣ್ಣಕ್ಕಿ ಉತ್ಸವ ನಡೆಯುವ ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಹಣ್ಣುಕಾಯಿ ನೈವೇದ್ಯ ಸಮರ್ಪಿಸಲಾಯಿತು.
ದೇವಾಲಯದ ಸುತ್ತಲೂ ಆಕರ್ಷಕ ಹೂವಿನ ಅಲಂಕಾರ ಮಾಡಲಾಗಿತ್ತು. ರಾತ್ರಿ 8.30 ರ ಸುಮಾರಿಗೆ ವಾದ್ಯಗೋಷ್ಠಿಗಳೊಂದಿಗೆ ಮಹಾಮಂಗಳಾರತಿ ನಡೆಯುತ್ತಿದ್ದಂತೆ ಹುತ್ತದ ತುದಿಯಲ್ಲಿ ಅಳವಡಿಸಿದ್ದ ಕಳಶವು ಅಲುಗಾಡುವ ಮೂಲಕ ವಿಸ್ಮಯ ಉಂಟಾಯಿತು.
ಹುತ್ತ ಅಲುಗಾಡಿದ ನಂತರ ಉಪವಾಸ ವ್ರತ ಕೈಗೊಂಡಿದ್ದ ಗೋಪಾಲಕನ ನೇತೃತ್ವದಲ್ಲಿ ಕರುವನ್ನು ತಂದು ಕಿವಿ ಚುಚ್ಚಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು. ಕರುವಿನ ಮೇಲೆ ಪುರಿ ಎರಚುವ ಮೂಲಕ ಭಕ್ತರು ಹರಕೆ ಸಮರ್ಪಿಸಿದರು. ಬಾನಹಳ್ಳಿ, ಬಗ್ಗಸಗೋಡು, ಚಕ್ಕಮಕ್ಕಿ, ಹೊರಟ್ಟಿ, ಕೆಂಜಿಗೆ ಸೇರಿದಂತೆ ವಿವಿಧ ಗ್ರಾಮಗಳ ಜನತೆ ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.