ADVERTISEMENT

‘ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:27 IST
Last Updated 21 ಸೆಪ್ಟೆಂಬರ್ 2013, 9:27 IST

ಅಜ್ಜಂಪುರ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸರ್ಕಾರ ಖಾಯಂ ನೌಕರರೆಂದು ಘೋಷಿಸಬೇಕು ಹಾಗೂ ಪ್ರತೀ ತಿಂಗಳು ಹತ್ತು ಸಾವಿರ ವೇತನ ನಿಗದಿಗೊ­ಳಿ­ಸ­ಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯ­ಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಅಧ್ಯಕ್ಷ ಎಸ್‌.ಎಲ್.ರಾಮಚಂದ್ರಪ್ಪ ಒತ್ತಾಯಿಸಿ­ದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಒಕ್ಕೂಟದ ಕಾರ್ಯದರ್ಶಿ ಎನ್‌.ಶಿವಣ್ಣ, ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿಗಳಾಗಿ ಪರಿವರ್ತಿಸಿ, ಸಹಾಯಕಿಯರನ್ನು ನೇಮಿಸಬೇಕು. ಬಾಡಿಗೆ ಹಾಗೂ ಸೋರುತ್ತಿರುವ ಅಂಗನವಾಡಿ ಕೇಂದ್ರ­ಗಳನ್ನು ನವೀಕರಿಸಿಬೇಕು.

ಕೆಲ ದುಷ್ಟರಿಂದ ಶೋಷಣೆ, ದಬ್ಬಾಳಿಕೆಗೆ ಒಳಗಾಗಿ ಆತಂಕದಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆ­ಯರಿಗೆ ರಕ್ಷಣೆ ಹಾಗೂ ನೈತಿಕ ಬೆಂಬಲ ಒದಗಿಸ­ಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಅಧ್ಯಕ್ಷೆ ಎಸ್‌.ಎಲ್‌.ರಾಧಾ ಸುಂದರೇಶ್‌, ಸಂವಿಧಾನ ಬದ್ಧ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇತರ ಸರ್ಕಾರಿ ನೌಕರ­ರಷ್ಟು ಸಮಯ ಹಾಗೂ ಕೆಲಸ ನಿರ್ವ­ಹಿಸುವ ಅಂಗನವಾಡಿ ನೌಕರರಿಗೆ ಇಎಸ್ಐ, ಪಿಎಫ್, ಗ್ರಾಚ್ಯುಟಿ ಫಂಡ್, ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಪುರಸಭಾಧ್ಯಕ್ಷ ನರೇಂದ್ರ ತಮ್ಮ ಸಂಬಳ ಸಾರಿಗೆ ವೆಚ್ಚವನ್ನು ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಿಕೊಳ್ಳುವ ಶಾಸಕರು, ಸಂಸದರು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಿಂದೇಟು ಹಾಕುತ್ತಿರುವುದು  ದುರದೃಷ್ಟಕರ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನ್ಯಾಯಯುತ ಬೇಡಿಕೆಗಳನ್ನು ಮುಂದಿನ ಅಧಿವೇಶನದಲ್ಲಿಟ್ಟು, ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಜಿ.ಎಚ್‌.­ಶ್ರೀನಿವಾಸ್‌ ಭರವಸೆ ನೀಡಿದರು.

ತಾ.ಪಂ.ಅಧ್ಯಕ್ಷೆ ಶಾಂತಾ ದ್ವಜಾರೋಹಣ ನೆರವೇರಿಸಿದರು. ಸದಸ್ಯೆ ಶಕುಂತಲಾ, ಮಾಜಿ ಶಾಸಕ ಟಿ.ಎಚ್‌.ಶಿಶಂಕರಪ್ಪ, ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಇಂದಿರಾ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ­ಕುಮಾರ್‌, ರಾಜ್ಯ ಸಮಿತಿ ಉಪಾಧ್ಯಕ್ಷ ಗುಣಶೇಖರ್‌, ಗೆಳೆಯರ ಬಳಗ ಅಧ್ಯಕ್ಷ ಎ.ಸಿ.ಚಂದ್ರಪ್ಪ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT