ADVERTISEMENT

‘ಭಗವಾಧ್ವಜ ಕಟ್ಟೆ ತೆರವುಗೊಳಿಸಿ ಕೋಮು ಭಾವನೆ ಕೆರಳಿಸಿದೆ’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:04 IST
Last Updated 12 ಮಾರ್ಚ್ 2014, 6:04 IST

ಚಿಕ್ಕಮಗಳೂರು: ಆಲ್ದೂರು ಪಟ್ಟಣ­ದಲ್ಲಿ ಕಳೆದ 23 ವರ್ಷಗಳಿಂದ ರಾರಾ­ಜಿಸುತ್ತಿದ್ದ ಭಗವಾಧ್ವಜ ಕಟ್ಟೆಯನ್ನು ಕಾಂಗ್ರೆಸಿಗರ ಪ್ರಚೋದನೆಯಿಂದ ಜಿಲ್ಲಾ­ಡಳಿತ ತೆರವುಗೊಳಿಸಿ ಕೋಮು ಭಾವನೆ ಕೆಳಿಸುವ ಕೆಲಸ ಮಾಡಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿ­ಸಿದ್ದಾರೆ.

ಧ್ವಜಕಟ್ಟೆ ತೆರವು ಪ್ರಕರಣ ಖಂಡಿಸಿ­ರುವ ರವಿ, ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಭಗವಾಧ್ವಜ ಕಟ್ಟೆ ತೆರವು ಮಾಡುವಂತಹ ದುಸ್ಸಾಹ­ಸಕ್ಕೆ ಕೈ ಹಾಕಿರುವುದು ಒಂದು ವರ್ಗ ಓಲೈಸಿ ರಾಜಕೀಯ ತುಷ್ಟೀಕರಣ ನೀತಿ ಅನುಸರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಭಾವನೆ ಕೆರಳಿಸುವುದು, ಪ್ರತಿಭಟಿ­ಸಲು ಮುಂದಾದವರನ್ನು ಬಂಧಿಸಿ ಜೈಲಿಗೆ ಕಳಿಸುವ ರಹಸ್ಯ ಕಾರ್ಯ ಸೂಚಿ ಇಟ್ಟುಕೊಂಡು ಕಾಂಗ್ರೆಸ್‌ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಏಕಪಕ್ಷೀಯವಾಗಿ ಸಹಾಯ ಮಾಡುವ ದೃಷ್ಟಿಯಿಂದ ಚುನಾವಣೆ ಘೋಷಣೆ ನಂತರ ಸಂದರ್ಭವನ್ನು ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿದೆ ಎಂದು ದೂರಿದಾದ್ದಾರೆ.

ಆಲ್ದೂರಿನಲ್ಲಿ 300­ಜನ ಸಿಬ್ಬಂದಿ ಬಳಸಿ ಧ್ವಜಕಟ್ಟೆ ಕಿತ್ತು­ಹಾಕಿರುವುದು ಪೌರುಷವೋ ಅಥವಾ ರಾಜಕೀಯ ಹುನ್ನಾರವೋ ಉತ್ತರಿಸ­ಬೇಕು. ಜಿಲ್ಲಾಧಿ­ಕಾರಿ ಕಾಂಗ್ರೆಸಿ­ಗರಂತೆ ವರ್ತಿಸಿದ್ದು, ಇಂತಹವರಿಂದ ನಿಷ್ಪಕ್ಷ­ಪಾತ ಚುನಾವಣೆ ನಡೆಯುವುದು ಅನುಮಾನ ಎಂದು ಕಿಡಿಕಾರಿದ್ದಾರೆ. ತೆರವುಗೊಳಿಸಿರುವ ಭಗವಾಧ್ವಜ­ವನ್ನು ಗೌರವಯುತವಾಗಿ ಮೊದಲಿನ ಸ್ಥಳ­ದಲ್ಲೇ ಪ್ರತಿಷ್ಠಾಪಿಸ­ಬೇಕು. ಇಲ್ಲದಿ­ದ್ದರೆ ಜಿಲ್ಲೆಯ ಶಾಂತಿ, ನೆಮ್ಮದಿ ಕದ­ಡಲು ಜಿಲ್ಲಾಡಳಿತವೇ ನೇರ ಕಾರಣ­ವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.