ADVERTISEMENT

‘25 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:43 IST
Last Updated 10 ಡಿಸೆಂಬರ್ 2013, 8:43 IST

ಚಿಕ್ಕಮಗಳೂರು: ರಾಜೀವ್‌ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ನಕ್ಸಲ್ ಪ್ರಭಾವಿತ ಗ್ರಾಮಗಳು ಸೇರಿ ದಂತೆ ಜಿಲ್ಲೆಯ 25 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಸದ ಜಯಪ್ರಕಾಶ ಹೆಗ್ಡೆ ಮುಂದಾಗಿದ್ದಾರೆ.

ಪಶ್ಚಿಮಘಟ್ಟ ಮತ್ತು ನಕ್ಸಲ್ ಪ್ರಭಾವಿತ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಯೋಜನೆ ಸಿದ್ದಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಸೌರವಿದ್ಯುತ್ ಕಲ್ಪಿಸಲು ಮಂಜೂರಾತಿ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಎ.ಎನ್.ಮಹೇಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.90ರಷ್ಟು ಅನುದಾನ ನೀಡಿದರೆ, ರಾಜ್ಯ ಸರ್ಕಾರ ಶೇ.10ರಷ್ಟು ಹಣ ಭರಿಸಲಿದೆ. ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಾದ ಮುಂಡ ಗಾರು, ತಲವಂತಿಕೂಡಿಗೆ, ತಾರೋಳಿಕೂಡಿಗೆ, ಮೆಣಸಿನಹಾಡ್ಯ, ಕೊಳೊಡಿ ಗಿರಿಜನ ಕಾಲೋನಿ, ಕಾರ್ಲೆ, ಚರಸಲು, ಹೊರಾಣೆಯಾದಗಾರು, ಹುಲತಾಳು, ಹರಲಾನೆ, ಇಡುಗುಂಡ, ಗರ್ಗೆ, ಮಣಮಾಣಾಹಾರ, ಪರ್ಪಲೆ, ತರಿಕೊಡ್ಲು, ಬಂದೆಹಕ್ಲು, ಎಲೆನೀರ್, ಗೋಳಿಗುಂಡಿ, ಕಚಿಗೆ, ಅಮ್ಮಡ್ಲು, ಗಂಧರ್ವ ಗಿರಿ, ಗುಂಡ್ಯಾ ಹುಮ್ಲ, ಹಗಲಗಂಚಿ, ಕೆರೆಕೊಳಲು, ಹಲಸಾರು ಗ್ರಾಮಗಳ ಯೋಜನೆ ವ್ಯಾಪ್ತಿಗೆ ಬರಲಿವೆ ಎಂದು ಹೇಳಿದರು.

ಪ್ರತಿ ಗ್ರಾಮಕ್ಕೆ ಇಂಧನ ಸ್ಥಾವರ ಹಾಕುತ್ತಿದ್ದು, 440 ವೋಲ್ಟ್ –10 ಅಶ್ವ ಶಕ್ತಿ ಮೋಟಾರ್‌ನೊಂದಿಗೆ ಮೂರು ಫೇಸ್ ಇರುತ್ತದೆ. ಇದರ ಮೂಲಕ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮನೆಗೆ 2 ಸಿಎಫ್ಎಲ್ ಬಲ್ಬ್ ಬಳಸಬಹುದು. ಪ್ರತಿ ರಸ್ತೆಯನ್ನು ಒಂದು ಕ್ಲಸ್ಟರ್ ಮಾಡಿಕೊಂಡಿದ್ದು, ರಸ್ತೆ ದೀಪ ಅಳವಡಿಸಲಾಗುವುದು ಎಂದರು.

ಕೇಂದ್ರದ ಪ್ರವಾಸೋದ್ಯಮ ಇಲಾಖೆ  ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ₨33.5 ಕೋಟಿ ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ ಎಸ್ಎಫ್‌ಸಿ ವಿಶೇಷ ಅನುದಾನವನ್ನು ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಒತ್ತಾಯದ ಮೇರೆಗೆ ಮಹಾತ್ಮಗಾಂಧಿ ಪಾರ್ಕ್‌ ಅಭಿವೃದ್ಧಿಗೆ ₨1.6 ಕೋಟಿ, ರತ್ನಗಿರಿ ಬೋರೆಯ ಮಕ್ಕಳ ಉದ್ಯಾನ ಅಭಿವೃದ್ಧಿಗೆ ₨1.6 ಕೋಟಿ ಅನುಮೋದನೆ ದೊರೆತಿದೆ ಎಂದರು.

ತರೀಕೆರೆ ಪಟ್ಟಣಕ್ಕೆ 4ನೇ ಹಂತದ ಕುಡಿಯುವ ನೀರು ನೀಡಲು ₨ 3ಕೋಟಿ  ಅನುದಾನಕ್ಕೆ ಸಂಸದರು ತಾತ್ವಿಕ ಒಪ್ಪಿಗೆ ಪಡೆದುಕೊಂಡಿದ್ದಾರೆ. ಬೆಂಗಳೂರು, ಹುಬ್ಬಳ್ಳಿ ರೈಲು ಸಂಪರ್ಕ ಕಲ್ಪಿಸಲು ಚಿಕ್ಕಮಗಳೂರು ರೈಲು ಮಾರ್ಗ ವಿಸ್ತರಣೆಗೆ ಜಯಪ್ರಕಾಶ ಹೆಗ್ಡೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.