ADVERTISEMENT

11 ವರ್ಷಗಳಿಂದ ತಲೆಮರೆಸಿಕೊಂಡಿದ್ದವ ಪತ್ತೆ

ಚಿಕ್ಕಮಗಳೂರು ಜಿಲ್ಲೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 9:06 IST
Last Updated 29 ಏಪ್ರಿಲ್ 2018, 9:06 IST

ಚಿಕ್ಕಮಗಳೂರು: ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಪೆರೋಲ್‌ ಮೇಲೆ ಹೊರಬಂದು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್  ಘನಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.

‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್‌ನ ಅಬ್ದುಲ್‌ ಘನಿಗೆ ಪತ್ನಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು 2007 ಫೆಬ್ರುವರಿ 23ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಕಟವಾದ ನಂತರ ಘನಿಯನ್ನು ಶಿವಮೊಗ್ಗದಿಂದ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. 2007ರ ನವೆಂಬರ್‌ 14ರಂದು ಪೆರೋಲ್‌ನಲ್ಲಿ ಹೊರಬಂದಿದ್ದ, ನ.29ರಂದು ವಾಪಸಾಗಬೇಕಿತ್ತು. ಆದರೆ, ವಾಪಸ್‌ ಹೋಗಿಲ್ಲ. ಶಾಖಿರ್‌ ಎಂದು ಹೆಸರು ಬದಲಿಸಿಕೊಂಡು, ಅದಕ್ಕೆ ಪೂರಕವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ತಲೆಮರೆಸಿಕೊಂಡಿದ್ದ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪೆರೋಲ್‌ಗೆ ನೀಡಿದ ಜಾಮೀನಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರ ಬಳಿ ಸೊಲ್ಲಾಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಘನಿಯ ಸಹೋದರ ಅಮೀರ್‌ ಹೆಸರು ಇತ್ತು. ಪರಿಶೀಲಿಸಿದಾಗ ಅವರಿಬ್ಬರೂ ಜಾಮೀನು ನೀಡಿಲ್ಲದಿರುವ ಖಾತರಿಯಾಯಿತು. ಜಾಮೀನು ಪತ್ರದಲ್ಲಿರುವುದು ನಕಲಿ ಸಹಿ ಎಂದು ಗೊತ್ತಾಯಿತು. ಜಾಮೀನು ಸಹಿ ವಂಚನೆಯ ಜಾಡು ಹಿಡಿದು ತನಿಖೆ ಮುಂದುವರಿ ಸಿದ್ದೆವು’ ಎಂದರು.

ADVERTISEMENT

‘ಘನಿಯು ಶಾಖಿರ್‌ ಎಂದು ಹೆಸರು ಬದಲಿಸಿಕೊಂಡು, ವಯಸ್ಸು– 48 ವರ್ಷ, ವೃತ್ತಿ– ಚಾಲಕ, ತಂದೆ ಹೆಸರು ಮಹಮ್ಮದ್‌ ಖಾಸಿಂ, ತಾಯಿ ಫಾತಿಮಾ, ವಾಸ– ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿ ದ್ದಾನೆ. ಈತನ ಅಸಲಿ ವಯಸ್ಸು 34 ವರ್ಷ. ನಕಲಿ ಆಧಾರ್‌ ಚೀಟಿಯನ್ನೂ ಸೃಷ್ಟಿಸಿಕೊಂಡಿದ್ದಾನೆ. 2009ರಲ್ಲಿ ಮತ್ತೆ ಮದುವೆಯಾಗಿದ್ದು ಪತ್ನಿ, ಮೂವರು ಮಕ್ಕಳು ಇದ್ದಾರೆ’ ಎಂದು ಅವರು ತಿಳಿಸಿದರು.

‘ಜೈಲಿನಲ್ಲಿರುವಾಗ ಘನಿಗೆ ಸಹಕೈದಿ ಶ್ರೀಧರ್‌ ₹ 3,000 ಕೊಟ್ಟಿದ್ದಾನೆ. ಸೊಲ್ಲಾಪುರದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಕೆಲವರಿಗೆ ಚಂದ್ರಪ್ಪ ಜಾಮೀನು ನಿಟ್ಟಿನಲ್ಲಿ ಖಾಲಿ ಪತ್ರಗಳನ್ನು ನೀಡಿದ್ದಾರೆ. ಅದರಲ್ಲಿ ಒಂದನ್ನು ಲಪಾಟಾಯಿಸಿ ಬಳಸಿಕೊಂಡು, ಪೆರೋಲ್‌ನಲ್ಲಿ ಘನಿ ಹೊರಬಂದಿದ್ದ’ ಎಂದು ಹೇಳಿದರು.

ಬೆರಳಚ್ಚು ಆಧರಿಸಿ ಪತ್ತೆ

‘ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ 2017ರ ನವೆಂಬರ್‌ 27ರಂದು ಕುರಿ ಕಳವು ಪ್ರಕರಣ ದಾಖಲಾಗಿತ್ತು. ಕಳವಿಗೆ ಬಳಸಿದ್ದ ವಾಹನದ ಮಾಲೀಕ ಶಾಖಿರ್ ಹೆಸರಿನಲ್ಲಿದೆ. ಪೊಲೀಸರು ಆರೋಪಿಯನ್ನು ಹಿಡಿದು, ಬೆರಳಚ್ಚನ್ನು ಡೇಟಾಬೇಸ್‌ಗೆ ಅಪ್‌ ಲೋಡ್‌ ಮಾಡಿದ್ದರು’ ಎಂದು ಅಣ್ಣಾಮಲೈ ತಿಳಿಸಿದರು.

‘ತಲೆಮೆರೆಸಿಕೊಂಡಿರುವ ಅಬ್ದುಲ್‌ ಘನಿ ಮತ್ತು ಶಾಖಿರ್‌ ಬೆರಳಚ್ಚು ಒಂದೇ ಆಗಿರುವುದು ಪರಿಶೀಲನೆ ವೇಳೆ ಪತ್ತೆಯಾಯಿತು. ಬೆರಳಚ್ಚಿನ ಗುರುತಿನ ಆಧಾರದಲ್ಲಿ ಘನಿಯನ್ನು ಪತ್ತೆ ಹಚ್ಚಿದೆವು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಸ್‌.ಗೀತಾ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ಘನಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ರವಾನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.