ಕಡೂರು: ತಾಲ್ಲೂಕಿನ ಗೆದ್ಲೆಹಳ್ಳಿ ಗ್ರಾಮದ ರೈತ ಮಲ್ಲೇಶಪ್ಪ ಮತ್ತು ಭಾಗ್ಯಮ್ಮ ಎಂಬುವರ ಮೂರು ಎಕರೆಯಲ್ಲಿ ಬೆಳೆದ ಕಬ್ಬಿನ ಗದ್ದೆಗೆ ಬುಧವಾರ ಸಂಜೆ ಬೆಂಕಿ ತಗುಲಿ ರೂ 1.50 ಲಕ್ಷ ಮೌಲ್ಯದ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ.
ಗದ್ದೆಯಲ್ಲಿ ವಿದ್ಯುತ್ ಕಂಬಗಳಿದ್ದು ಜೋಡಿಲೈನ್ ಹಾದು ಹೋಗಿದೆ, ಹೊಲಗಳಲ್ಲಿ ಜೋಡಿಲೈನ್ ಹಾದುಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಜಂಪ್ ಅಳವಡಿಸಬೇಕಾಗಿತ್ತು. ಮೆಸ್ಕಾಂ ನಿರ್ಲಕ್ಷ್ಯದಿಂದ ಶಾರ್ಟ್ ಸರ್ಕಿಟ್ ಸಂಭವಿಸಿ ಕಬ್ಬು ಸುಟ್ಟಿರುವುದಾಗಿ ರೈತರು ಆರೋಪಿಸಿದ್ದಾರೆ.
ರೈತರ ಈ ವಾದ ಒಪ್ಪದ ಮೆಸ್ಕಾಂ ಅಧಿಕಾರಿಗಳು ‘ನಾವು ರೈತರಿಗೆ ವಿದ್ಯುತ್ ಲೈನ್ ಬಿಟ್ಟು 10 ಅಡಿ ದೂರದಿಂದ ಬೆಳೆ ಬೆಳೆಯುವಂತೆ ಮನವಿ ಮಾಡಿದ್ದರೂ ಅವರು ಲೈನ್ ಸಮೀಪವೇ ಬೆಳೆ ಬೆಳೆಯುವುದರಿಂದ ಅವಘಡ ಸಂಭವಿಸಿದೆ’ ಎಂದು ಸಮರ್ಥನೆ ನೀಡಿದ್ದಾರೆ.
ಕಡೂರು ಶಾಸಕ ಡಾ.ವೈ.ಸಿ.ವಿಶ್ವನಾಥ್ ಸ್ಥಳಕ್ಕೆ ಕಂದಾಯ, ಕೃಷಿ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಕಾನೂನು ಪ್ರಕಾರ ಪರಿಹಾರ ನೀಡಲು ಸಾಧ್ಯವಿದ್ದಲ್ಲಿ ಪರಿಹಾರ ನೀಡುವಂತೆ ಶಾಸಕರು ಆದೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.