
ಆನೆಗಳ ಓಡಾಟದ ಸಂಗ್ರಹ ಚಿತ್ರ
ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ವರ್ಷವಿಡೀ ಇದ್ದ ಆನೆಗಳ ಹಿಂಡು ಈಗ ಚಿಕ್ಕಮಗಳೂರು ಜಿಲ್ಲೆಯತ್ತ ದಾಂಗುಡಿ ಇಟ್ಟಿವೆ. ಮೂಡಿಗೆರೆ ಸುತ್ತಮುತ್ತಲ ಜನ ನೆಮ್ಮದಿ ಹಾಳಾಗಿದ್ದರೆ, ಅರಣ್ಯ ಇಲಾಖೆ ಅಧಿಕಾರಿಗಳ ನಿದ್ರೆಗೆಡಿಸಿವೆ.
ಬೇಲೂರು ತಾಲ್ಲೂಕಿನಿಂದ ಬಂದಿರುವ 35 ಆನೆಗಳು ಈಗ ಗೋಣಿಬೀಡು–ಕಸ್ಕೆಬೈಲು ಸಮೀಪ ಬೀಡು ಬಿಟ್ಟಿವೆ. ಇದೇ ಗುಂಪಿನ ಎರಡು ಆನೆಗಳು ಮೊದಲು ಬಂದಿದ್ದು, ಅವು ಚಿಕ್ಕಮಗಳೂರು ನಗರದ ಸಮೀಪಕ್ಕೆ ಬಂದು ಮಲ್ಲಂದೂರು ಕಡೆಗೆ ಮುಖ ಮಾಡಿವೆ.
ಬೇಲೂರು–ಸಕಲೇಶಪುರ ತನಕ ಹೋಗುವ ಬೀಟಮ್ಮ ಮತ್ತು ಭುವನೇಶ್ವರಿ ಗುಂಪಿನ ಆನೆಗಳು. ವರ್ಷಪೂರ್ತಿ ಬೇಲೂರು ತಾಲ್ಲೂಕಿನ ಬಿಕ್ಕೋಡು ಸುತ್ತಮುತ್ತ ಇದ್ದವು. ಈ ಆನೆಗಳು ಜಿಲ್ಲೆಯ ಕಡೆಗೆ ಬಂದಿಲ್ಲ ಎಂಬ ಸಮಾಧಾನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿದ್ದರು. ಮೊದಲಿಗೆ ಎರಡು ಆನೆಗಳು ಈ ಗುಂಪಿನಿಂದ ಬಂದಿದ್ದು, ಅವು ಮತ್ತಾವರ, ತಳಿಹಳ್ಳ, ಜಕಕ್ಕನಹಳ್ಳಿ ಮೂಲಕ ಇಂದಾವರದ ತೋಟಗಳ ತನಕ ಬಂದು ಮತ್ತೆ ಮಲ್ಲಂದೂರು ಕಡೆಗೆ ಹೊರಟಿವೆ.
ಎರಡು ಆನೆಗಳು ಜಿಲ್ಲೆಗೆ ಪ್ರವೇಶ ಪಡೆದ ಎರಡು–ಮೂರು ದಿನಗಳ ಅಂತರದಲ್ಲೇ 35ಕ್ಕೂ ಹೆಚ್ಚು ಆನೆಗಳಿರುವ ಗುಂಪು ಜಿಲ್ಲೆಯನ್ನು ಪ್ರವೇಶಿಸಿದೆ. ಸದ್ಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಮತ್ತು ಕಸ್ಕೆಬೈಲು ಸಮೀಪದ ತೋಟಗಳಲ್ಲಿವೆ. ಇವು ಯಾವ ಕಡೆ ಪ್ರಯಾಣ ಮಾಡಲಿವೆ ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸುತ್ತಿದ್ದಾರೆ.
ಕೆಲ ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಆಗಿರುವುದರಿಂದ ನಿಗಾ ವಹಿಸುವುದು ಸುಲಭ. ನಗರದ ಸಮೀಪಕ್ಕೆ ಬಂದು ಹೋಗಿರುವ ಆನೆಗಳಿಗೆ ರೇಡಿಯೊ ಕಾಲರ್ ಇಲ್ಲ. ಮರಿಯಾನೆಗಳ ರೀತಿ ಕಾಣಿಸುತ್ತಿರುವ ಇವು ಸಮಾಧಾನವಾಗಿ ಇರುವುದು ಅರಣ್ಯ ಇಲಾಖೆಗೆ ಮತ್ತು ಜನರಿಗೆ ಕೊಂಚ ಸಮಾಧಾನ ತಂದಿದೆ.
ನಗರದ ಕಡೆಗೆ ಬಂದಿದ್ದರೆ ಕೊಂಚ ಗಲಿಬಿಲಿಯಾಗುತ್ತಿತ್ತು. ಆದರೆ, ಅವು ಈಗಾಗಲೇ ಮಲ್ಲಂದೂರು ಕಡೆಗೆ ಹೋಗಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಗೋಣಿಬೀಡು– ಕಸ್ಕೆಬೈಲು ಕಡೆಗೆ ಬಂದಿರುವ 35 ಆನೆಗಳ ಮೇಲೆ ಮೇಲೆ ಅಧಿಕಾರಿಗಳು ಹೆಚ್ಚು ಗಮನ ಹರಿಸಿದ್ದಾರೆ. ಕ್ಷಣ ಕ್ಷಣಕ್ಕೂ ಚಲನ–ವಲನ ಗಮನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ವಾರದ ಅಂತರದಲ್ಲೇ ಆನೆ ದಾಳಿಗೆ ಇಬ್ಬರ ಮೃತಪಟ್ಟಿದ್ದು, ಈಗ ಬೇಲೂರಿನ ಆನೆಗಳು ಬಂದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.