ಚಿಕ್ಕಮಗಳೂರು: ‘ಕ್ಷೇತ್ರದಲ್ಲಿ ಶಾಸಕ ಸಿ.ಟಿ.ರವಿ ಸಾಧನೆ ಶೂನ್ಯ. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ಅಭಿವೃದ್ಧಿ ರಾಜಕಾರಣ ಮಾಡಿಲ್ಲ’ ಎಂದು ರಾಜೀವ್ಗಾಂಧಿ ಪಂಚಾಯತ್ರಾಜ್ ಸಂಘಟನೆ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಇಲ್ಲಿ ಸೋಮವಾರ ದೂಷಿಸಿದರು.
‘ತಾಲ್ಲೂಕಿನ ಲಕ್ಯಾ, ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ 34 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಮೋದನೆಗೆ ಪ್ರಯತ್ನ ನಡೆದಿದೆ ಎಂದು ಶಾಸಕ ರವಿ ನಗರದಲ್ಲಿ ಈಚೆಗೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರಂಭದಲ್ಲಿ ವೀರಾವೇಶದಿಂದ ಹೇಳಿದ್ದಾರೆ. ಈ ಯೋಜನೆ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್. ಸುಳ್ಳಿನ ಕಂತೆ ಕಟ್ಟುವುದರಲ್ಲಿ ರವಿ ನಿಸ್ಸೀಮರು. ಸುಳ್ಳನ್ನು ನೂರು ಬಾರಿ ಹೇಳಿ, ಅದನ್ನೇ ಸತ್ಯ ಮಾಡುವ ಗೊಬೆಲ್ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿಯಲ್ಲ ಮಜಾವಾದಿ, ₹70 ಲಕ್ಷದ ವಾಚು ಕಟ್ದಿದ್ದರು ಎಂದೆಲ್ಲ ಟೀಕಿಸುತ್ತಿದ್ದಾರೆ. ಆ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ’ ಎಂದ ದೂರಿದರು.
‘ಬಿಜೆಪಿಯವರು ರಾಮ, ಗುರುದತ್ತಾತ್ರೇಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ರಾಮನ ಹೆಸರು ಹೇಳಿ ರಾಮ ಮಂದಿರ ಕಟ್ಟುವುದು ಬಿಟ್ಟು ನಾಥೂರಾಮ್ ಮಂದಿರ ಕಟ್ಟಲು ಮುಂದಾಗಿದ್ದಾರೆ. ನಾಥೂರಾಮ್ ಮಂದಿರ ಕಟ್ಟುವುದು ಅವರ ಅಜೆಂಡಾವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಗಮನಹರಿಸಿಲ್ಲ’ ಎಂದು ಆಪಾದಿಸಿದರು. ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಕಾರ್ತಿಕ್, ಹೊನ್ನೇಶ್, ಕಾರ್ತಿಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.