ಶೃಂಗೇರಿ: ಆರೋಗ್ಯ ಸುಧಾರಣೆ, ಲೋಕ ಕಲ್ಯಾಣ, ರೈತರ ಅಭಿವೃದ್ಧಿಗಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬ ಶೃಂಗೇರಿ ಶಾರದಾ ಮಠದಲ್ಲಿ ನಡೆಸಲಿರುವ ಅತಿರುದ್ರ ಮಹಾಯಾಗಕ್ಕೆ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಬುಧವಾರ ಚಾಲನೆ ದೊರೆಯಿತು.
ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ ‘ಧರ್ನುಮಾಸವು ಅತ್ಯಂತ ಶ್ರೇಷ್ಠ ಮಾಸವಾಗಿದ್ದು, ಈ ಸಂದರ್ಭದಲ್ಲಿ ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ಆರೋಗ್ಯದ ಸುಧಾರಣೆ ಹಾಗೂ ಅವರ ರಾಜಕೀಯ ಶ್ರೇಯಸ್ಸಿಗಾಗಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ರಾಜ್ಯದ ಜನರ ಹಿತಕ್ಕೋಸ್ಕರ ಕೂಡಾ ಯಾಗ ಮಾಡಲಾಗುತ್ತದೆ’ ಎಂದರು.
‘2018ರ ಚುನಾವಣೆಯಲ್ಲಿ ಹೋರಾಡಲು ತಾಯಿ ಶಾರದೆ ಹಾಗೂ ಉಭಯಗುರುಗಳ ಆರ್ಶೀವಾದಬೇಕಿದ್ದು, ಹಾಗಾಗಿ 12 ದಿನ ನಿರಂತರವಾಗಿ ಯಾಗ ನೆರವೇರಲಿದೆ. ಇದೇ 14ರ ಸಂಕ್ರಾತಿಯಂದು ಪೂರ್ಣಾಹುತಿ ನೆರವೇರಲಿದ್ದು, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಎಚ್.ಜಿ. ವೆಂಕಟೇಶ್, ಎಚ್.ಟಿ. ರಾಜೇಂದ್ರ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ವಿವೇಕಾನಂದ ಸುಂಕುರ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಗಂಡಘಟ್ಟ ಮಂಜುನಾಥ್, ಮುಖಂಡರಾದ ಆಶೋಕ್, ಟಿ.ಟಿ ಕಳಸಪ್ಪ, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ವಿಜಯ್ ತೇಜ ಶೆಟ್ಟಿ, ತಾಲ್ಲೂಕು ಮಹಿಳಾ ಕಾರ್ಯಾಧ್ಯಕ್ಷೆ ರಾಜಲಕ್ಷ್ಮೀ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.