ADVERTISEMENT

ದಂಪತಿ ಸಹಿತ ಮೂವರು ಸಾವು

ರಂಗೇನಹಳ್ಳಿ ಬಳಿ ಕಾರುಗಳು ಮುಖಾಮುಖಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:28 IST
Last Updated 9 ಜನವರಿ 2021, 16:28 IST
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಹಲಸೂರು ಕೆರೆ ಏರಿ ಬಳಿ ಅಪಘಾತಕ್ಕೀಡಾದ ಕಾರುಗಳು ಜಖಂ ಆಗಿರುವುದು
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಹಲಸೂರು ಕೆರೆ ಏರಿ ಬಳಿ ಅಪಘಾತಕ್ಕೀಡಾದ ಕಾರುಗಳು ಜಖಂ ಆಗಿರುವುದು   

ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಹಲಸೂರು ಕೆರೆ ಏರಿ ಮೇಲೆ ಶನಿವಾರ ಮಧ್ಯಾಹ್ನ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ದಂಪತಿ ಸಹಿತ ಮೂವರು ಸಾವನ್ನಪ್ಪಿದ್ದಾರೆ.

ಕುಂದಾಪುರದ ಅನಿಲ್ ಕುಮಾರ್ (30), ಪತ್ನಿ ಅಶ್ವಿನಿ (26), ಚಾಲಕ ನಾಗೇಂದ್ರ (28) ಮೃತರು. ಅನಿಲ್‌ ಕುಮಾರ್ ದಂಪತಿಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ರುವ ಅನಿಲ್ ಕುಮಾರ್ ಕುಟುಂಬವು ಇತ್ತೀಚೆಗೆ ಕುಂದಾಪುರಕ್ಕೆ ಬಂದಿತ್ತು. ಬೆಂಗಳೂರಿಗೆ ಬಸ್‌ನಲ್ಲಿ ವಾಪಸಾಗಲು ಅವರು ಮೊದಲು ನಿರ್ಧರಿಸಿದ್ದರು. ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಾಯಿಸಿ ಕಾರ್‌ನಲ್ಲಿ ಹೊರಟಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಕರಕುಚ್ಚಿ ಗ್ರಾಮದಿಂದ ತೀರ್ಥಹಳ್ಳಿಗೆ ಹೊರಟಿದ್ದ ಮತ್ತೊಂದು ಕಾರಿನ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಒಂದು ಕಾರು ಕೆರೆ ಏರಿಯ ತಡೆಗೋಡೆಯನ್ನು ಮುರಿದುಕೊಂಡು ನುಗ್ಗಿದೆ. ಅನಿಲ್‌ ಕುಮಾರ್‌ ಕುಟುಂಬ ಸಾಗುತ್ತಿದ್ದ ಕಾರಿನ ಚಾಲಕ ನಾಗೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡ ಅನಿಲ್ ಕುಮಾರ್ ಹಾಗೂ ಪತ್ನಿ ಅಶ್ವಿನಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯಲ್ಲಿಯೇ ಮೃತಪಟ್ಟಿದ್ದಾರೆ. ಈ ದಂಪತಿಯ 11 ತಿಂಗಳ ಹೆಣ್ಣು ಮಗು ಮಾತ್ರ ಅಪಾಯದಿಂದ ಪಾರಾಗಿದ್ದು, ಲಕ್ಕವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದು ಕಾರಿನಲ್ಲಿದ್ದ ಕರಕುಚ್ಚಿ ಗ್ರಾಮದ ಕಿರಣ್ ಹಾಗೂ ಅಶ್ವತ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಸುದ್ದಿ ತಿಳಿದು ಸುತ್ತಲಿನ ಗ್ರಾಮಸ್ಥರು ಸೇರಿ ಗಾಯಾಳುಗಳನ್ನು 108 ಆಂಬುಲೆನ್ಸ್‌ನಲ್ಲಿ ಸಾಗಿಸಲು ಸಹಕರಿಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.