
ಮೂಡಿಗೆರೆ: ಪಟ್ಟಣದ ಹ್ಯಾಂಡ್ ಪೋಸ್ಟ್ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಡಿ. 19ರಿಂದ ಎರಡು ದಿನಗಳ ಕಾಲ ಕೃಷಿ ಹಾಗೂ ತೋಟಗಾರಿಕಾ ಮೇಳ ಏರ್ಪಡಿಸಲಾಗಿದೆ ಎಂದು ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಕೃಷಿ ಹಾಗೂ ತೋಟಗಾರಿಕಾ ಮೇಳದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಡಿ. 19 ಹಾಗೂ 20ರಂದು ಕೆವಿಕೆ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ ನಡೆಯಲಿದ್ದು, ರೈತರು ಆರ್ಥಿಕವಾಗಿ ಸಬಲರಾಗಲು ಈ ಮೇಳ ಸಹಕಾರಿಯಾಗಿದೆ. ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಕೃಷಿ ಯಂತ್ರೋಪಕರಣ, ವಿವಿಧ ಬಗೆಯ ಕೃಷಿ ಗಿಡಗಳು, ಜಾನುವಾರು ಸೇರಿದಂತೆ ವಿವಿಧ ಬಗೆಯ ಕೃಷಿ ಕುರಿತು ರೈತರು ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ ವಿಜ್ಞಾನಿಗಳಿಂದ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಹಾಗಾಗಿ ಮೇಳದ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎ.ಟಿ. ಕೃಷ್ಣಮೂರ್ತಿ ಮಾತನಾಡಿ, ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ಮಾಹಿತಿ, ಜತೆಗೆ ವಿಜ್ಞಾನಿಗಳೊಂದಿಗೆ ಸಂವಾದ, ರೈತರಿಗೆ ಉತ್ತಮವಾದ ಆಧುನಿಕ ತಂತ್ರಜ್ಞಾನದ ಮಾಹಿತಿ, ಅಡಕೆ ಬೆಳೆ ಜತೆಗೆ ಮಿಶ್ರ ಬೆಳೆ ಬೆಳೆಯುವುದು, 12 ತಳಿಗಳ ಕೋಳಿ, ಕುರಿ, ಹಸು, ಜೇನು ಸಾಗಾಣಿಕೆ ಮೂಲಕ ಆದಾಯ, ಅಡಿಕೆ ಸಿಪ್ಪೆಯಲ್ಲಿ ಗೊಬ್ಬರ ತಯಾರಿಕೆ, 20 ತಳಿಗಳ ಭತ್ತ, ವಿದೇಶಿ ಹಣ್ಣುಗಳು, ಜಲಮುಕ್ತಿ ಭತ್ತದ ಬೆಳೆ ಬಿಡುಗಡೆ ಸೇರಿದಂತೆ ಕೃಷಿ ಬಗ್ಗೆ ವಿವಿಧ ಪ್ರಾತ್ಯಕ್ಷಿಕೆ ಮೂಲಕ ರೈತರು ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಹಾಗಾಗಿ ರೈತರು ಸೇರಿದಂತೆ ಮುಂದಿನ ಯುವಪೀಳಿಗೆ ಕೃಷಿ ಬಗ್ಗೆ ಅರಿತುಕೊಳ್ಳಲು ಮೇಳದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು, ಕೃಷಿಕ ಸಮಾಜದ ನಿರ್ದೇಶಕ ಪಿ.ಕೆ. ನಾಗೇಶ್, ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಪೂರ್ಣೇಶ್, ನಿರ್ದೇಶಕ ಯೋಗೇಶ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಶ್ರೀನಿವಾಸ್, ಹಿರಿಯ ಕ್ಷೇತ್ರ ಅಧೀಕ್ಷಕ ಎ.ವಿ. ಸ್ವಾಮಿ, ಸಸ್ಯ ಸಂರಕ್ಷಣ ವಿಜ್ಞಾನಿ ಸುಚಿತ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.