ಅಜ್ಜಂಪುರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನಿಲುವು ತಳೆದಿವೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಮುಖಂಡ ಬಸವಣ್ಣಪ್ಪ ಸೊಪ್ಪಿನ್ ಆರೋಪಿಸಿದರು.
ತಾಲ್ಲೂಕಿನ ಗೊಂಡೇದಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.
'ಸರ್ಕಾರವು ಕೃಷಿ ಪರಿಕರಗಳ ಬೆಲೆ ಏರಿಸಿದೆ. ಕೃಷಿ ಅಗತ್ಯ ವಸ್ತಗಳಾದ ಗೊಬ್ಬರ, ಕ್ರಿಮಿ-ಕೀಟನಾಶಕಗಳ ದರ ಹೆಚ್ಚಿಸಿದೆ. ಆದರೆ, ರೈತರ ಕೃಷಿ ಜಮೀನುಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಲ್ಲಿ ವಿಫಲವಾಗಿದೆ’ ಎಂದು ದೂರಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಮುಖಂಡ ಎಂ. ಮಹೇಶ್ವರಯ್ಯ ಮಾತನಾಡಿ, ಸರ್ಕಾರ, ರೈತ ಪರ ಯೋಜನೆ ಜಾರಿಗೊಳಿಸಬೇಕು. ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಲೆ ಕುಸಿತದಂತಹ ಸಂದರ್ಭದಲ್ಲಿ ರೈತರಿಗೆ ಸಹಾಯಹಸ್ತ ಚಾಚಬೇಕು. ಹತಾಶ ಸ್ಥಿತಿ ತಲುಪಿರುವ ರೈತ ಸಮುದಾಯಕ್ಕೆ ಭರವಸೆಯ ಬೆಳಕು ಮೂಡಿಸಬೇಕು ಎಂದು ಒತ್ತಾಯಿಸಿದರು.
ಕೆಪಿಆರ್ಎಸ್ ಮುಖಂಡ ಕಾಮ್ರೆಡ್ ನವೀನ್ ಕುಮಾರ್, ಆಂಥೋನಿ ಥಾಮಸ್, ಮುಖಂಡ ಗಿರೀಶ್, ಪಂಚಾಯಿತಿ ಮಾಜಿ ಅಧ್ಯಕ್ಷ ಷಡಾಕ್ಷರಿ, ಜಯಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.