ADVERTISEMENT

ನರಸಿಂಹರಾಜಪುರ | ಅಂಬೇಡ್ಕರ್ ಭವನ ಕಾಮಗಾರಿ ಕಳಪೆ: ಆರೋಪ

ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:16 IST
Last Updated 13 ಸೆಪ್ಟೆಂಬರ್ 2025, 6:16 IST
ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ನೂರುಲ್ ಹುದಾ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆ ನಡೆಯಿತು
ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ನೂರುಲ್ ಹುದಾ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆ ನಡೆಯಿತು   

ನರಸಿಂಹರಾಜಪುರ: ‘ತಾಲ್ಲೂಕು ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಹುತೇಕ ಅಂಬೇಡ್ಕರ್ ಭವನಗಳು ಸುಸಜ್ಜಿತವಾಗಿ ನಿರ್ಮಾಣವಾಗಿಲ್ಲ. ಕೆಲವು ಸಮುದಾಯ ಭವನಗಳ ಕಾಮಗಾರಿ ಅಪೂರ್ಣಗೊಂಡಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಆರೋಪಿಸಿದರು.

ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ನೂರುಲ್ ಹುದಾ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ, ‘ಕರ್ಕೇಶ್ವರ ಗ್ರಾಮದಲ್ಲಿ 10 ವರ್ಷದ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು ಕಾಮಗಾರಿಯೂ ಕಳಪೆಯಿಂದ ಕೂಡಿದ್ದು ಈವರೆಗೂ ಕಾಮಗಾರಿ ಪೂರ್ಣವಾಗಿಲ್ಲ’ ಎಂಬ ವಿಚಾರ ಪ್ರಸ್ತಾಪವಾಯಿತು.

ಈ ನಡುವೆ ಮಾತನಾಡಿದ ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಕರ್ಕೇಶ್ವರ ಗ್ರಾಮದ ಅಂಬೇಡ್ಕರ್ ಭವನವನ್ನು ತಳಪಾಯ ಹಾಕದೆ ನಿರ್ಮಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ ಎಂದರು.

ADVERTISEMENT

ಬಹುತೇಕ ಅಂಬೇಡ್ಕರ್ ಭವನಗಳು ಸುಸಜ್ಜಿತವಾಗಿರದೆ, ಸ್ವಸಹಾಯ ಸಂಘದ ಸಭೆಯ ನಡೆಸಲು, ಗಣಪತಿ ಕೂರಿಸಲು ಸೀಮಿತವಾಗಿದೆ ಎಂದು ವಾಲ್ಮೀಕಿ ಸಂಘದ ನಾಗರಾಜ್ ದೂರಿದರು.

ತಾಲ್ಲೂಕು ಭೀಮ್ ಆರ್ಮಿ ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿ, ‘ಬಾಳೆಹೊನ್ನೂರು ಭಾಗಕ್ಕೆ ಈ ಹಿಂದೆ ಅಂಬೇಡ್ಕರ್ ಭವನಕ್ಕೆ ₹50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಜಾಗದ ಕೊರತೆಯಿಂದ ಅನುದಾನ ಹಿಂದಕ್ಕೆ ಹೋಯಿತು. ಪ್ರಸ್ತುತ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ನೀಡಲು ಮುಂದಾಗಿದ್ದರೂ ಅಂಬೇಡ್ಕರ್ ಭವನ ನಿರ್ಮಿಸಿಲ್ಲ. ದಲಿತರು ಬಡವರಾಗಿದ್ದು, ಲಕ್ಷಾಂತರೂ ವೆಚ್ಚ ಮಾಡಿ ವಿವಾಹ ಮಾಡಲು ಸಾಧ್ಯವಾಗುವುದಿಲ್ಲ. ದಯಮಾಡಿ ಬಾಳೆಹೊನ್ನೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿ.ರಾಮು ಅವರು ಭೂಸೇನಾ ನಿಗಮದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವವರ ಮನೆಗಳಿಗೆ ಹಕ್ಕುಪತ್ರ ನೀಡದಿರುವ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು. ತಲತಲಾಂತರಗಳಿಂದ ವಾಸವಾಗಿರುವವರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಮುಖಂಡರಾದ ಡಿ.ರಾಮು, ರಾಜೇಶ, ಮಂಜುನಾಥ್ ವಿಷಯ ಪ್ರಸ್ತಾಪಿಸಿದರು.

ನರೇಗಾದ ಸಹಾಯಕ ನಿರ್ದೇಶಕ ಮನೀಷ್ ಮಾತನಾಡಿ, ಗ್ರಾಮ ಠಾಣಾ ಜಾಗಕ್ಕೆ ಯಾವುದೇ ಕಾರಣಕ್ಕೂ ಹಕ್ಕುಪತ್ರ ಕೊಡಲು ಬರುವುದಿಲ್ಲ. ಇ–ಸ್ವತ್ತು ದಾಖಲಿಸಿಕೊಡಲು ಕೇಳಬಹುದು ಎಂದರು.

ಜಿಲ್ಲಾ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ಸಮಿತಿ ಸದಸ್ಯ ಎಂ.ಮಹೇಶ್ ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದು ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ತಹಶೀಲ್ದಾರ್ ತಿಳಿಸಿದರು.

ಬಿಳಾಲ್ ಕೊಪ್ಪ ಮತ್ತಿತರ ಗ್ರಾಮಗಳಲ್ಲಿ ದಲಿತರ ಜಮೀನುಗಳಿಗೆ ಹಕ್ಕುಪತ್ರ ಕೊಡಲು ಅರಣ್ಯ ಇಲಾಖೆಯವರು ತಮಗೆ ಸೇರಿದ ಜಾಗ ಎಂದು ಅಡ್ಡಿಪಡಿಸಿದ್ದಾರೆ. ಅರಣ್ಯ ಇಲಾಖೆಯ ಏಕಪಕ್ಷೀಯ ನಿರ್ಧಾರದಿಂದ ಜಮೀನು ಮಂಜೂರಾಗುತ್ತಿಲ್ಲ. ಸಾಗುವಳಿದಾರರಿಗೆ ಜಮೀನಿನ ಹಕ್ಕುಪತ್ರ ನೀಡಲು ಸರ್ಕಾರ 94(ಬಿ)ಗೆ ತಿದ್ದುಪಡಿ ತಂದಿದೆ. ಇದರ ಬಗ್ಗೆ ಮಾಹಿತಿ ನೀಡಿ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಮಂಜುನಾಥ್ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡಲಾಗುವುದಾಗಿ ತಹಶೀಲ್ದಾರ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನೂರುಲ್ ಹುದಾ ಮಾತನಾಡಿ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಮೇಲೆ ಬಹಳ ಹಿಂದಿನಿಂದಲೂ ದೌರ್ಜನ್ಯಗಳಾಗುತ್ತಿವೆ. ಸಭೆಯಲ್ಲಿ ಭಾಗವಹಿಸುವ ಮುಖಂಡರು ಪರಸ್ಪರ ಗೌರವಿಸುವುದನ್ನು ಕಲಿಯಬೇಕು. ಸಭೆಯ ಘನತೆ ಎತ್ತಿ ಹಿಡಿಯಬೇಕು. ತಾಳ್ಮೆಯಿಂದ ವರ್ತಿಸಬೇಕು. ಯಾವ ವಿಷಯ ಪ್ರಸ್ತಾಪವಾಗಬೇ‌ಕು. ಯಾವುದು ಮುಖ್ಯ ವಿಷಯ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ನರೇಗಾದ ಸಹಾಯಕ ನಿರ್ದೇಶಕ ಮನಿಷ್, ಎಡಿಎಲ್ ಆರ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆಯ ನಿರಂಜನ್ ಇದ್ದರು.

ಜಂಟಿ ಸರ್ವೆಯಲ್ಲಿ ಯಾವುದೇ ಸಂಘಟನೆಯ ಮುಖಂಡರಿಗೆ ಅವಕಾಶವಿಲ್ಲ ‘ಪರಸ್ಪರ ಗೌರವ ಕೊಡುವುದನ್ನು ಕಲಿಯಿರಿ’

ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡಿ’ ‘ರಾವೂರು ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಜನಾಂಗಕ್ಕೆ ಸ್ಮಶಾನವಿಲ್ಲದೆ ಭದ್ರಾಹಿನ್ನೀರಿನಲ್ಲಿ ತೆಪ್ಪದಲ್ಲಿ ತೆರಳಿ ನಡುಗಡ್ಡೆಯಲ್ಲಿ ಶವಸಂಸ್ಕಾರ ಮಾಡುವ ಸ್ಥಿತಿಯಿದೆ. ಈ ಹಿಂದೆ ಸ್ಮಶಾನಕ್ಕೆ ಮಂಜೂರಾದ ಜಾಗ ಪ್ರವಾಸೋದ್ಯಮ ನಿಗಮದವರಿಗೆ ನೀಡಲಾಗಿದೆ. ಪ್ರಸ್ತುತ ತಹಶೀಲ್ದಾರ್ ಅವರು 20 ಗುಂಟೆ ಜಾಗ ಗುರುತಿಸಿದ್ದಾರೆ. ಆದರೆ ಇದಕ್ಕೂ ಕೆಲವರು ತಕಾರರು ತೆಗೆದಿದ್ದಾರೆ. ನಾವು ಕೃಷಿ ಉದ್ದೇಶ ಅಥವಾ ಇನ್ಯಾವುದೇ ಉದ್ದೇಶಕ್ಕೆ ಜಾಗ ಕೇಳುತ್ತಿಲ್ಲ. ಮೃತಪಟ್ಟವರ ಶವಸಂಸ್ಕಾರಕ್ಕೆ ಕೇಳುತ್ತಿರುವುದು. ಯಾವುದೇ ಒತ್ತಡಕ್ಕೆ ಮಣಿಯದೆ ಸದರಿ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿಕೊಡಬೇಕು’ ಎಂದು ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಮನವಿ ಮಾಡಿದರು. ‘ಸದರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲಾಗಿದೆ. 20 ಗುಂಟೆ ಜಾಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಸ್ಮಶಾನಕ್ಕಾಗಿ ಎಂದು ಮೀಸಲಿರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಮಂಜೂರಾತಿ ಮಾಡಿಕೊಡುವುದಾಗಿ ತಹಶೀಲ್ದಾರ್ ನೂರುಲ್ ಹುದಾ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.