ADVERTISEMENT

ಚಿಕ್ಕಮಗಳೂರು | ಬೆರಟಿಕೆರೆ ಏತ ನೀರಾವರಿ: ಕಾಮಗಾರಿಗೆ ಕಾರ್ಯಾದೇಶ

ಹುಲಿಕೆರೆ ಸುತ್ತಮುತ್ತಲ ಹಳ್ಳಿಗಳ ನೀರಿನ ಬರ ನೀಗಿಸುವ ಯೋಜನೆ: ಕಾಮಗಾರಿ ಆರಂಭಿಸಲು ಸಿದ್ಧತೆ

ವಿಜಯಕುಮಾರ್ ಎಸ್.ಕೆ.
Published 2 ಆಗಸ್ಟ್ 2023, 5:39 IST
Last Updated 2 ಆಗಸ್ಟ್ 2023, 5:39 IST
ಅಯ್ಯನಕೆರೆ ಭರ್ತಿ ಹಂತಕ್ಕೆ ತಲುಪಿರುವುದು
ಅಯ್ಯನಕೆರೆ ಭರ್ತಿ ಹಂತಕ್ಕೆ ತಲುಪಿರುವುದು   

ಚಿಕ್ಕಮಗಳೂರು: ಐತಿಹಾಸಿಕ ಅಯ್ಯನಕೆರೆಯ ಕೋಡಿಯಿಂದ ಹರಿಯುವ ನೀರನ್ನು ಹುಲಿಕೆರೆ ಗ್ರಾಮ ಬೆರಟಿಕೆರೆಗೆ ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭಿಸಲು ಸಣ್ಣ ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. 

ಕಡೂರು ತಾಲ್ಲೂಕಿನ ಜೀವನಾಡಿ ಕೆರೆಗಳಲ್ಲಿ ಅಯ್ಯನಕೆರೆ ಕೂಡ ಒಂದು. ಬಯಲುಸೀಮೆ ಮತ್ತು ಮಲೆನಾಡ ಅಂಚಿನ ಸಖರಾಯಪಟ್ಟಣದ ಹೊರವಲಯದಲ್ಲಿ ಇರುವ ಈ ಕೆರೆಗೆ ಪಶ್ಚಿಮಘಟ್ಟದ ಗಿರಿಶ್ರೇಣಿಯಿಂದ ನೀರು ಹರಿದು ಬರಲಿದೆ. ಈ ಕೆರೆ ತುಂಬಿದ ಬಳಿಕ ಕೋಡಿಯಿಂದ ಹರಿಯುವ ನೀರನ್ನು ಮತ್ತೊಂದು ಕೆರೆಗೆ ತುಂಬಿಸುವ  ಏತ ನೀರಾವರಿ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.

ಕಾಮಗಾರಿ ಆರಂಭಿಸಲು ಬೇಕಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನೂ ಸಣ್ಣ ನೀರಾವರಿ ಇಲಾಖೆ ಪೂರ್ಣಗೊಳಿಸಿದೆ. ₹9.90 ಕೋಟಿ ಮೊತ್ತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರ ಹೊಸ ಕಾಮಗಾರಿಗಳನ್ನು ಆರಂಭಿಸಲು ಇನ್ನೂ ಅನುಮತಿ ನೀಡಿಲ್ಲ. ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಕಾರ್ಯಾದೇಶ ದೊರೆತಿದ್ದು ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಸರ್ಕಾರದ ಹಸಿರು ನಿಶಾನೆಗೆ ಕಾದಿದ್ದಾರೆ. ಕಾಮಗಾರಿ ಆರಂಭಗೊಂಡು ನಿಗದಿತ ವೇಳೆಯಲ್ಲೇ ಪೂರ್ಣಗೊಂಡರೆ ಕೆಲವೇ ವರ್ಷಗಳಲ್ಲಿ ಹುಲಿಕೆರೆಯ ಬಿರಟಿಕೆರೆಗೆ ಅಯ್ಯನಕೆರೆ ನೀರು ಸೇರಲಿದೆ.

ADVERTISEMENT

ಅಯ್ಯನಕೆರೆ ತುಂಬಿದ ನಂತರ ಕೋಡಿಯಿಂದ ನೀರು ನಾಗೇನಹಳ್ಳಿ ಬಳಿ ಇರುವ ಚೆಕ್‌ ಡ್ಯಾಂ ಸೇರಲಿದೆ. ಅಲ್ಲಿಂದ ನೀರನ್ನು ಎತ್ತಿ ಹುಲಿಕೆರೆಯ ಬಿರಟಿಕೆರೆಗೆ  ಹರಿಸುವುದು ಯೋಜನೆಯ ಉದ್ದೇಶ. ನಾಗೇನಹಳ್ಳಿ ಚೆಕ್‌ ಡ್ಯಾಂನಿಂದ 6.5 ಕಿಲೋ ಮೀಟರ್‌ ದೂರ ಇರುವ ಬಿರಟಿಕೆರೆಗೆ ನೀರು ಕೊಂಡೊಯ್ಯಲಾಗುತ್ತದೆ.

ಬಿರಟಿಕೆರೆ, ಸ್ವಾಮಿಕಟ್ಟೆ ಸೇರಿ ಸುತ್ತಮುತ್ತಲ ಸಣ್ಣ–ಪುಟ್ಟ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಯೋಜನೆ ಸಾಕಾರಗೊಂಡರೆ ಈ ಭಾಗದ ಹಳ್ಳಿಗಳ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅಯ್ಯನಕೆರೆ ಭರ್ತಿಗೆ ಅರ್ಧ ಅಡಿ ಬಾಕಿ
ಮುಂಗಾರು ಮಳೆ ನಿರೀಕ್ಷಿತ ಮಟ್ಟಕ್ಕೆ ಸುರಿಯದಿದ್ದರೂ ಅಯ್ಯನಕೆರೆ ಭರ್ತಿಯ ಹಂತಕ್ಕೆ ತಲುಪಿದೆ. ಕೆರೆಯ ನೀರು ಕೋಡಿ ದಾಟಿ ಹರಿಯಲು ಇನ್ನು ಅರ್ಧ ಅಡಿ ಮಾತ್ರ ಬಾಕಿ ಇದೆ. 150 ಹೆಕ್ಟೇರ್ ವಿಸ್ತೀರ್ಣದ ಈ ಕೆರೆಯು 0.45 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪಶ್ಚಿಮಘಟ್ಟದ ಗಿರಿಶ್ರೇಣಿಯಿಂದ ಹರಿದು ಬರುವ ನೀರನ್ನು ಸಂಗ್ರಹಿಸಿಕೊಳ್ಳುವ ಈ ಕೆರೆ 1574 ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸಲಿದೆ. ಈ ಕೆರೆ ತುಂಬಿ ಕೋಡಿಯಿಂದ ನೀರು ಹರಿದರೆ ಬ್ರಹ್ಮಸಮುದ್ರ ಕೆರೆಗೂ ನೀರು ಸೇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.